ಗದಗ:- ಹಚ್ಚ ಹಸಿರಿನ ಸ್ವಚ್ಚಂದ ಪರಿಸರ ಹೊಂದಿರೋ ಉತ್ತರ ಕರ್ನಾಟಕದ ಸಹ್ಯಾದ್ರಿ, ಆಯುರ್ವೇದದ ಸಸ್ಯಕಾಶಿ ಎಂದೇ ಪ್ರಖ್ಯಾತಿ ಹೊಂದಿರೋ ಕಪ್ಪತಗುಡ್ಡ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ.
ಗದಗ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ ವ್ಯಾಪಿಸಿರೋ ಕಪ್ಪತಗುಡ್ಡ ಪರ್ವತಶ್ರೇಣಿ ಇದೀಗ ಮಳೆಗಾಲ ಪ್ರಾರಂಭವಾಗ್ತಿದ್ದಂತೆ ಹಚ್ಚ ಹಸಿರಿನಿಂದ ಕಂಗೊಳಿಸ್ತಾ ಇದೆ. ಇಡೀ ಕಪ್ಪತಗುಡ್ಡ ಪರ್ವತಶ್ರೇಣಿಗೆ ಹಸಿರ ಹೊದಿಕೆ ಹೊಚ್ಚಿದಂತೆ ಗೋಜರವಾಗ್ತಾ ಇದೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ಇರೋ ಕಪ್ಪತ್ತಗುಡ್ಡ ನೋಡಲು ಪ್ರವಾಸಿಗರ ದಂಡೇ ಹರಿದು ಬರ್ತಾ ಇದೆ. ನೋಡಲು ಥೇಟ್ ಮಲೆನಾಡಿನ ಸೊಬಗನ್ನೂ ಕೂಡಾ ನಾಚಿಸುವಂತಹ ಪರಿಸರ ಹೊಂದಿರೋ ಕಪ್ಪತಗುಡ್ಡ ಅಗಾಧ ಆಯುರ್ವೇದದ ಸಸ್ಯ ಸಂಪತ್ತನ್ನ ಹೊಂದಿದೆ. ಶುಧ್ಧ ಗಾಳಿ ಜೊತೆಗೆ ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸೋ ಗಾಳಿಗುಂಡಿ ಪರ್ವತವನ್ನ ಒಳಗೊಂಡಿದೆ. ಪ್ರತಿನಿತ್ಯ ಬೆಳಿಗ್ಗೆ 5 ಘಂಟೆಯಿಂದಲೇ ಪ್ರವಾಸಿಗರ ದಂಡು ತಂಡೋಪತಂಡವಾಗಿ ಇಲ್ಲಿಗೆ ಹರಿದು ಬರ್ತಾ ಇದೆ. ಹೆಚ್ಚಾಗಿ ಯುವಕರು, ಯುವತಿಯರು ಈ ಬೆಟ್ಟವನ್ನೇರಿ ಎಂಜಾಯ್ ಮಾಡ್ತಾರೆ. ಬೆಳಗಿನ ಜಾವ ಬೆಟ್ಟಗಳಿಗೆ ತಾಗುವಂತೆ ಮೋಡಗಳು ಗೋಚರವಾಗೋದನ್ನ ಕಣ್ತುಂಬಿಕೊಳ್ತಾರೆ. ಸೆಲ್ಫಿ, ಫೋಟೋಗಳನ್ನ ಕ್ಲಿಕ್ಕಿಸಿಕೊಂಡು ಸಂತಸ ಪಡ್ತಾರೆ. ಕಪ್ಪತಗುಡ್ಡ ಪರ್ವತಶ್ರೇಣಿ ಬೇಸಿಗೆಯಲ್ಲಿ ಒಣಗಿದಂತೆ ಕಾಣಿಸತ್ತೆ, ಮಳೆ ಪ್ರಾರಂಭ ಆಗಿದ್ದೇ ತಡ ಸಂಜೀವಿನಿಯಂತೆ ಮತ್ತೆ ಚಿಗುರೊಡೆದು ನಿಲ್ಲೋ ಕಾರಣ ಇದು ಸಂಜೀವಿನಿ ಪರ್ವತವೇ ಅಂತಾ ಸ್ಥಳೀಯರು ಹೆಳ್ತಾರೆ. ಎಪ್ಪತ್ತುಗಿರಿ ನೋಡೋದಕ್ಕಿಂತ ಕಪ್ಪತ್ತಗಿರಿ ನೋಡು ಅಂತಾ ಹಿರಿಯರ ಉಕ್ತಿಯಂತೆ ಈ ಪರ್ವತ ಶ್ರೇಣಿ ಇದ್ದು ಕಪ್ಪತಗುಡ್ಡವನ್ನ ಜೀವನದಲ್ಲಿ ಒಮ್ಮೆಯಾದ್ರೂ ನೀವೂ ಕೂಡಾ ಮಿಸ್ ಮಾಡದೇ ನೋಡಿ….