ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪವಿತ್ರಾ ಗೌಡ ಅವರ ಮನೆ ಖರೀದಿ ವಿಚಾರದಲ್ಲಿ ದಿ. ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಹೆಸರು ಕೇಳಿಬರುತ್ತಿದೆ. ಮನೆ ಖರೀದಿ ಪತ್ರಕ್ಕೆ ಸೌಂದರ್ಯ ಜಗದೀಶ್ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಬಹಿರಂಗವಾಗಿಲ್ಲ.
ದರ್ಶನ್ ಅವರ ಆಪ್ತ ವಲಯದಲ್ಲಿ ಸೌಂದರ್ಯ ಜಗದೀಶ್ ಅವರು ಸಹ ಗುರುತಿಸಿಕೊಂಡಿದ್ದರು. ಅಲ್ಲದೇ ಪವಿತ್ರಾ ಗೌಡ ಅವರ ಖಾತೆಗೆ ಜಗದೀಶ್ ಸುಮಾರು 2 ಕೋಟಿ ರೂ. ಹಣ ಕಳುಹಿಸಿದ್ದರು ಎಂದು ಹೇಳಲಾಗುತ್ತಿದೆ. ಜಗದೀಶ್ ಅಕೌಂಟ್ನಿಂದ ಟ್ರಾನ್ಸಫರ್ ಆಗಿರೋ 2 ಕೋಟಿ ರೂ. ಹಣ ಯಾಕಾಗಿ ಕಳುಹಿಸಲಾಗಿದೆ? ಜಗದೀಶ್ ಆತ್ಮಹತ್ಯೆಗೂ ಇದಕ್ಕೂ ಸಂಬಂಧ ಇದೆಯೇ? ಯಾವ ವಿಚಾರಕ್ಕಾಗಿ ಪವಿತ್ರಾಗೆ ಹಣ ಕೊಟ್ಟಿದ್ದರು? ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
Rice Water: ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಬಿಸಾಕುವುದಿಲ್ಲ..!
2017 ನವೆಂಬರ್ 13 ರಂದು ಪವಿತ್ರಾಗೌಡಗೆ 1 ಕೋಟಿ ರೂ. ವರ್ಗಾವಣೆಯಾಗಿದೆ. 2018, ಜನವರಿ 23 ರಂದು ಪವಿತ್ರಾಗೌಡಗೆ ಮತ್ತೆ 1 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು. 2018, ಜನವರಿ 24 ರಂದು ಪವಿತ್ರಾಗೌಡ ಮನೆ ಖರೀದಿಸಿದ್ದರು. ಟಿಜಿಎಂಸಿ ಬ್ಯಾಂಕ್ ಲಿಮಿಟೆಡ್ ರಾಜಾಜಿನಗರ ಬ್ರಾಂಚ್ನಲ್ಲಿ ವ್ಯವಹಾರ ಮಾಡಲಾಗಿದೆ. ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಹಣ ಕೊಟ್ಟ ದಾಖಲೆ ಮಾತ್ರ ಲಭ್ಯವಾಗಿದೆ.
ಈವರೆಗೂ ಸೌಂದರ್ಯ ಜಗದೀಶ್ಗೆ ಹಣ ವಾಪಸ್ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಸೌಂದರ್ಯ ಜಗದೀಶ್ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಉದ್ಯಮದಲ್ಲಿ ನಷ್ಟವಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಸಂಬಂಧಿಸಿ ಡೆತ್ನೋಟ್ ಸಹ ಸಿಕ್ಕಿತ್ತು. ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪಾಲುದಾರರ ಮೇಲೆ ಅವರ ಪತ್ನಿ ವಂಚನೆಯ ಆರೋಪ ಮಾಡಿದ್ದರು.