ತುಮಕೂರು:- ವಿವಾಹಿತ ಪುರುಷನ ಪ್ರೀತಿಸಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರೋ ದಾರುಣ ಘಟನೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ನಡೆದಿದೆ. ಇಬ್ಬರೂ ಪ್ರೇಮಿಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ (19) ಎಂಬ ವಿಧ್ಯಾರ್ಥಿನಿ ರಂಗಶಾಮಣ್ಣ (50) ಎಂಬುವರನ್ನು ಪ್ರೀತಿಸುತ್ತಿದ್ದಳು. ಆದರೆ ಇದಕ್ಕೆ ಕುಟುಂಬದವರು ವಿರೋಧಿಸಿದ ಕಾರಣ ಪ್ರಿಯಕರನ ಜೊತೆಗೆ ಯುವತಿ ಕಳೆದ ೩ ದಿನಗಳ ಹಿಂದೆ ಕಾರಿನಲ್ಲಿ ಓಡಿಹೋಗಿದ್ದಳು.
ಇಬ್ಬರು ನಾಪತ್ತೆಯಾಗಿರುವ ವಿಷಯ ತಿಳಿದು ಕುಟುಂಬಸ್ಥರು ತೀವ್ರ ಶೋಧ ನಡೆಸಿದ್ದಾರೆ. ಆದರೆ ಮಾವತ್ತೂರು ಕೆರೆಯ ದಡದಲ್ಲಿ ಕಾರು, ಇಬ್ಬರ ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕೋಳಾಲ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಬೋಟ್ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಈಜು ಪಟುಗಳನ್ನು ಕರೆಯಿಸಿ ಕೆರೆಯಲ್ಲಿ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೋಳಾಲ ಪಿಎಸ್ಐ ರೇಣುಕಾ ಯಾದವ್ ಹಾಗೂ ಯೋಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.