ಚಳ್ಳಕೆರೆ, ಜೂ.23- ನಗರದ ಹೊರವಲಯದ ನಿರ್ಮಲ ಲಾಡ್ ಸಮೀಪದ ಪೂಜಾ ಡಾಬಾ ಬಳಿ, ಚಾಕು ತೋರಿಸಿ ಮಾರಣಾಂತಿಕ ಹಲ್ಲೆ ನಡೆಸಿ, ಹಣ,ಬಂಗಾರ,ಹಾಗೂ ಬೆಳ್ಳಿ ಒಡವೆಗಳನ್ನ ದೋಚಿ ಪರಾರಿಯಾಗಿರುವ ಘಟನೆ
ನೆನ್ನೆ ತಡರಾತ್ರಿ ನಡೆದಿದೆ. ಶಿಕ್ಷಕ ಈರಣ್ಣ ಹಾಗೂ ಪತ್ನಿ ರಾಧಮ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಹಿಂಭಾಗದ ಹಿಂಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಬೆಡ್ ರೂಮನಲ್ಲಿ ಮಲಗಿದ್ದ ಇಬ್ಬರ ದಂಪತಿಗಳನ್ನ ಚಾಕು ತೋರಿಸಿ ದೊಣ್ಣೆಯಿಂದ ಹಲ್ಲೆ ಮಾಡಿ ಮೈ ಮೇಲೆ ಹಾಕಿಕೊಂಡಿದ್ದ ಒವಡವೆಗಳನ್ನು ಹಾಗೂ ಬೀರುವಿನಲ್ಲಿದ್ದ ಹಣವನ್ನು ದೋಚಿದ್ದಾರೆ.
ಅಲ್ಲದೆ,ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡಲಾಗುವುದು ಎಂದು ಪ್ರಾಣ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ನಂತರ ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಸಿಪಿಐ ಆರ್ ಎಫ್ ದೇಸಾಯಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು, ಗಾಯಗೊಂಡ ದಂಪತಿಗಳನ್ನು ಚಿತ್ರದುರ್ಗ ಜಿಲ್ಲಾ ಎಸ್ ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು, ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದು, ಈಗಾಗಲೇ ಕಳ್ಳರಿಗಾಗಿ ಶೋಧ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲೇ ದರೋಡೆ ಕೋರರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಚಳ್ಳಕೆರೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ನಗರದ ನೆಹರು ಸರ್ಕಲ್ ಸೇರಿದಂತೆ, ವಿವಿಧ ಕಡೆಗಳಲ್ಲಿ ಅಳವಡಿಸಲಾಗಿದ್ದ ಸಿ ಸಿ ಕ್ಯಾಮೆರಾ ಗಳು ಕೆಟ್ಟು ಹೋಗಿದ್ದು, ಕಳೆದ ಎರಡು ವರ್ಷಗಳಿಂದಲೂ, ದುರಸ್ತಿ ಮಾಡಿಸದೆ ಇರುವುದೇ ಕಳ್ಳತನ ಹೆಚ್ಚಾಗಲು ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತೊಂದರೆ ಯಾವುದೇ ಪ್ರಯೋಜನವಾಗಿಲ್ಲ ಇನ್ನಾದರೂ ನಗರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಸಿಸಿ ಕ್ಯಾಮೆರಾ ಗಳನ್ನು ದುರಸ್ತಿ ಮಾಡಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ವರದಿ :ಹನುಮಂತರಾಜು,ಚಳ್ಳಕೆರೆ