ಬಾಗಲಕೋಟೆ :– ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಮೇಲೆ ಸಾಲದ ಭಾರ ಹೊರಿಸಲಿದೆ. ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದೆ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಟೀಕಿಸಿದರು.
ಬಾಗಲಕೋಟ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರಂತಿಮಠ , ‘ಅಭಿವೃದ್ಧಿ ಕಾರ್ಯಗಳಿಗಾಗಿ ಆದಾಯ ಹೆಚ್ಚಿಸಿಕೊಳ್ಳಲು ವಿವಿಧ ವಸ್ತುಗಳ ಬೆಲೆ ಹೆಚ್ಚು ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಆದರೆ, ಅವರು ಅಭಿವೃದ್ಧಿಗಾಗಿ ಮಾಡುತ್ತಿಲ್ಲ. ಗ್ಯಾರಂಟಿಗಾಗಿ ಮಾಡುತ್ತಿದ್ದಾರೆ’ ಎಂದು ದೂರಿದರು.‘ಸ್ಟಾಂಪ್ ಡ್ಯೂಟಿ, ಭೂಮಿ ಖರೀದಿ ದರ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಎಲ್ಲ ವಸ್ತುಗಳ ಬೆಲೆ ಹೆಚ್ಚಳಕ್ಕೆ ಸರ್ಕಾರ ಕಾರಣವಾಗಿದೆ.
ಇಷ್ಟು ಸಾಲದೆಂಬಂತೆ ಬೆಂಗಳೂರಿನಲ್ಲಿನ ಸರ್ಕಾರಿ ಆಸ್ತಿ ಮಾರಾಟ ಮಾಡಲು ಮುಂದಾಗಿದೆ. ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಬಾರದು’ ಎಂದು ಆಗ್ರಹಿಸಿದರು. ಬೇರೆ ದೇಶದಲ್ಲಿದ್ದ ಬಂಗಾರವನ್ನು ದೇಶಕ್ಕೆ ತರುವ ಕೆಲಸವನ್ನು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮಾಡಿದೆ. ಆದರೆ, ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದು ಕಾಂಗ್ರೆಸ್ ಆಡಳಿತ’ ಎಂದು ವ್ಯಂಗ್ಯವಾಡಿದರು.
ಬೇರೆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬೆಲೆ ಹೆಚ್ಚಳ ಮಾಡಿದರೆ ಪ್ರತಿಭಟನೆ ಮಾಡಲಿ. ಅಲ್ಲಿ ಮಾಡಿದ್ದಾರೆ ಎಂದು ನೀವೂ ಮಾಡುವುದು ಸರಿಯಲ್ಲ. ಜನರಿಗೆ ಹೊರೆಯಾಗುತ್ತಿದ್ದು, ಕೂಡಲೇ ಬೆಲೆ ಹೆಚ್ಚಳ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.ರಾಜ್ಯದ ವಿವಿಧೆಡೆ ಕೊಲೆಗಳು ಆಗುತ್ತಲೇ ಇವೆ. ಕಾನೂನು ವ್ಯವಸ್ಥೆ ಕುಸಿದಿದೆ. ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ’ ಎಂದು ಟೀಕಿಸಿದರು.ಗ್ಯಾರಂಟಿ ಜಾರಿ ಮಾಡಿದರೆ ಎಲ್ಲ ಮುಚ್ಚಿಕೊಂಡು ಹೋಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೆಲಸ ಮಾಡುವುದಿಲ್ಲ ಎಂಬುದು ಗೊತ್ತಾಗಿದೆ. ಭೂಸ್ವಾಧೀನ ವಿಳಂಬ ಮಾಡಿರುವುದರಿಂದ ಎರಡು ವರ್ಷಗಳಲ್ಲಿ 9 ರೈಲ್ವೆ ಮಾರ್ಗ ಕಾಮಗಾರಿಗಳು ವಿಳಂಬವಾಗಿವೆ. ಭೂಮಿ ಸ್ವಾಧೀನ ಮಾಡಿಕೊಡಬೇಕು ಎಂದರು.