ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಪೊಲೀಸರ ತನಿಖೆ ತೀವ್ರವಾಗಿದೆ. ಒಂದು ವಾರದ ಬಳಿಕ ದರ್ಶನ್ಗೆ ಜ್ಞಾನೋದಯವಾದಂತೆ ಕಾಣುತ್ತಿದೆ. ಪರಿಚಯಸ್ಥ ಪೊಲೀಸ್ ಅಧಿಕಾರಿಗಳನ್ನು ಕಾಣುತ್ತಿದ್ದಂತೆ, ದರ್ಶನ್ ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದು ಅಲವತ್ತುಕೊಂಡಿದ್ದಾರೆ.
ಸಾರ್ ನಾನು ತಪ್ಪು ಮಾಡಿಬಿಟ್ಟೆ. ಮುಂಗೋಪದಿಂದ ತಪ್ಪು ಮಾಡಿಬಿಟ್ಟೆ. ಅನಗತ್ಯವಾಗಿ ನಾನು ಕೇಸಲ್ಲಿ ಸಿಕ್ಕಿಬಿಟ್ಟೆ. ಸ್ನೇಹಿತರನ್ನು ನಂಬಿ ನಾನು ಹಾಳಾದೆ. ನನ್ನ ಜೀವನದಲ್ಲಿ ಇದೊಂದು ಕಪ್ಪುಚುಕ್ಕಿ ಎಂದು ಪೊಲೀಸರ ಬಳಿ ದರ್ಶನ್ ಪಶ್ಚಾತ್ತಾಪಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇತ್ತ ಪೊಲೀಸರ ವಿಚಾರಣೆ ವೇಳೆ ಎ-1 ಆರೋಪಿ ಪವಿತ್ರಾಗೌಡ ಬಾಯಿ ಬಿಡುತ್ತಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಏನೇ ಕೇಳಿದ್ರೂ ಪವಿತ್ರಾ ಗೌಡ ನನಗೇನೂ ಗೊತ್ತಿಲ್ಲ. ನಿಮಗೆ ಏನ್ ಬೇಕೋ ಹಾಗೆ ಬರೆದುಕೊಳ್ಳಿ ಅಂತ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಪವಿತ್ರಾ ಗೌಡ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬವಾಗಿದೆ.
ಮರ್ಡರ್ ಕೇಸಲ್ಲಿ ರಕ್ತಸಿಕ್ತ ಬಟ್ಟೆಗಳೇ ಸಾಕ್ಷಿ: ಇಡೀ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವೇ ಬಟ್ಟೆಗಳು. ಸ್ಪಾಟ್ ಮಹಜರು ವೇಳೆ, ಕೊಲೆ ನಡೆದ ದಿನದಂದು ದರ್ಶನ್ ಹಾಗೂ ಪವಿತ್ರಾ ಗೌಡ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಟ್ಟೆಗಳನ್ನು ಡ್ರೈ ಕ್ಲಿನಿಂಗ್ಗೆ ಕೊಟ್ಟಿದ್ದರು ಕೂಡ ರಕ್ತದ ಕಲೆಗಳು ಪತ್ತೆಯಾಗಿವೆ.
ಇದೇ ತನಿಖೆಗೆ ಸಹಕಾರಿಯಾಗಲಿದೆ. ಇನ್ನೂ ರಕ್ತದ ಕಲೆಗಳು ಇಲ್ಲದಿದ್ದರೂ, ಚಿತ್ರದುರ್ಗದ ರಾಘವೇಂದ್ರ ತಾನೇ ಬಟ್ಟೆಯನ್ನು ಎರಡೆರಡು ಬಾರಿ ಒಗೆದು ಹಾಕಿದ್ದ. ಮತ್ತೊಂದು ಕಡೆ ಜಗ್ಗ ಬಟ್ಟೆಯನ್ನು ಎತ್ತಿ ಬಿಸಾಡಿದ್ದ. ಈ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.