ಹುಬ್ಬಳ್ಳಿ: ‘ರಾಜ್ಯ ಸರ್ಕಾರವು ಪೆಟ್ರೋಲ್, ಡೀಸೆಲ್ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಶಾಸಕ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ
ಇಲ್ಲಿನ ಅರವಿಂದನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೆಟ್ರೋಲ್, ಡೀಸೆಲ್ ದರ ಹೆಚ್ಚಿರುವ ರಾಜ್ಯಗಳ ಮಾಹಿತಿ ನೀಡಿ, ದರ ಏರಿಕೆಗೆ ಸಮರ್ಥನೆ ನೀಡಲಾಗಿದೆ. ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂಧನ ದರ ಕಡಿಮೆ ಇದ್ದು, ಈ ಬಗ್ಗೆ ಮಾಹಿತಿ ನೀಡಿಲ್ಲ’ ಎಂದರು.
‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೊಡ್ಡ ಜಾಹೀರಾತು ನೀಡಿದ್ದ ಕಾಂಗ್ರೆಸ್, ಇದೀಗ ಬೆಲೆ ಏರಿಕೆ ಮೂಲಕ ರಾಜ್ಯ ಜನರಿಗೆ ‘ಚೊಂಬು’ ನೀಡಿದೆ. ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದಕ್ಕೆ ಈ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಕಾಯಿಪಲ್ಲೆ, ಧಾನ್ಯ ಮತ್ತಿತರ ವಸ್ತುಗಳ ದರವೂ ಏರಿಕೆಯಾಗಲಿದ್ದು, ಗ್ಯಾರಂಟಿ ಹೆಸರಿನಲ್ಲಿ ಒಂದು ಕಡೆ ಕೊಟ್ಟು, ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
‘ತೊಗರಿಬೇಳೆ, ಅಕ್ಕಿ ದರವೂ ಏರಿಕೆಯಾಗಿದೆ. ದುಬಾರಿ ಮದ್ಯದ ಬೆಲೆ ಇಳಿಕೆ ಮಾಡಲು ಮುಂದಾಗಿದ್ದು, ಸರ್ಕಾರ ಯಾರ ಪರ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಸಾಲದ ಮೇಲೆ ಅಧಿಕ ತೆರಿಗೆ ವಿಧಿಸಿರುವುದರಿಂದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳೊಂದಿಗೆ, ದೊಡ್ಡ ಉದ್ಯಮಗಳೂ ಸಂಕಷ್ಟಕ್ಕೀಡಾಗಿವೆ’ ಎಂದರು.
ಕ್ರಮ ವಹಿಸದ ಪೊಲೀಸರು: ‘ಧಾರವಾಡದಲ್ಲಿ ಗೋವುಗಳ ಸಾಗಣೆ ವಿರೋಧಿಸಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಅಲ್ಪಸಂಖ್ಯಾತರಿಂದ ದೇಶವಿರೋಧಿ ಕೃತ್ಯಗಳು ಹೆಚ್ಚುತ್ತಿವೆ. ದುಷ್ಟಶಕ್ತಿಗಳ ಚಟುವಟಿಕೆ ಬಗ್ಗೆ ಪೊಲೀಸರಿಗೂ ಮಾಹಿತಿ ಇದ್ದರೂ ತಡೆಯುತ್ತಿಲ್ಲ’ ಎಂದು ಆರೋಪಿಸಿದರು.
‘ಸರ್ಕಾರದ ಕುಮ್ಮಕ್ಕಿನಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸಚಿವ ಜಮೀರ್ ಅಹ್ಮದ್ ಗೂಂಡಾಗಳ ನಡುವೆ ಸೆಟಲ್ಮೆಂಟ್ ಮಾಡಿಸುವಲ್ಲಿ ತೊಡಗಿದ್ದಾರೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಇಲ್ಲಿಂದ ವರ್ಗಾವಣೆ ಮಾಡಿದ್ದ ಪೊಲೀಸರನ್ನು ಮರಳಿ ನಿಯೋಜಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ. ತುಷ್ಟೀಕರಣ ನೀತಿಯಿಂದ ಅರಾಜಕತೆ ಸೃಷ್ಟಿಯಾಗಿದೆ. ಸರ್ಕಾರ ಇದನ್ನೆಲ್ಲ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ವಕ್ತಾರ ರವಿ ನಾಯಕ್, ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಗ್ರಾಮಾಂತರ ಘಟಕದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಇದ್ದರು.
‘ವಿಚಾರಣೆ ಎದುರಿಸಲು ಸಿದ್ಧ’
‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಕೊಳೆಗೇರಿಗಳಿದ್ದು, ಆಶ್ರಯ ಕಾಲೊನಿಗಳ ಸಂಖ್ಯೆಯೂ ಹೆಚ್ಚಿದೆ. ಈ ಹಿಂದೆ ಮೂಲಸೌಕರ್ಯವಿಲ್ಲದ ಕಾರಣ ಅಲ್ಲಿನ ಮನೆಗಳಲ್ಲಿ ವಾಸಿಸಲು ಇಚ್ಛಿಸದ ಹಲವರು, ಬೇರೆಡೆ ಬಾಡಿಗೆ ಮನೆಗಳಲ್ಲಿ ವಾಸವಿದ್ದರು. ಮನೆ ಮಂಜೂರಾಗಿದ್ದರೂ 15 ವರ್ಷದಿಂದ ಅಲ್ಲಿ ವಾಸ ಮಾಡಿಲ್ಲ’ ಎಂದು ಅರವಿಂದ ಬೆಲ್ಲದ ಹೇಳಿದರು.
‘ಸಮೀಕ್ಷೆ ಮಾಡಿಸಿ, ಯಾರು ವಾಸವಿದ್ದರೋ ಅವರಿಗೇ ಮನೆ ನೀಡಲು ತಿಳಿಸಿದ್ದೇನೆ. ಮೂಲಸೌಕರ್ಯ ಒದಗಿಸಿದ ಬಳಿಕ ಮನೆಗಳು ಬೇಕು ಎಂದು ಹಲವರು ಬರುತ್ತಿದ್ದಾರೆ. ಇದೇ ಕಾರಣಕ್ಕೆ ನನ್ನ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ವಿಚಾರಣೆ ಎದುರಿಸಲು ಸಿದ್ಧ’ ಎಂದರು.