ತ್ರಿಶ್ಶೂರ್: ಕೇರಳದಿಂದ ಮೊಟ್ಟ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಲಯಾಳಂ ಚಿತ್ರರಂಗದ ನಟ ಸುರೇಶ್ ಗೋಪಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ‘ಭಾರತ ಮಾತೆ’ ಎಂದು ಬಣ್ಣಿಸಿದ್ದಾರೆ. ಹಾಗೆಯೇ ಕೇರಳದ ಮಾಜಿ ಮುಖ್ಯಮಂತ್ರಿ ಕೆ ಕರುಣಾಕರನ್ ಅವರನ್ನು ‘ದಿಟ್ಟ ಆಡಳಿತಗಾರ’ ಎಂದೂ ಪ್ರಶಂಸಿಸಿದ್ದಾರೆ. ಮೊದಲ ಅವಧಿಯಲ್ಲಿಯೇ ಕೇಂದ್ರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಅವಕಾಶ ಪಡೆದ ಸುರೇಶ್ ಗೋಪಿ ಅವರು, ಬಿಜೆಪಿಯ ಸೈದ್ಧಾಂತಿಕ ವಿರೋಧಿ ಪಕ್ಷಗಳ ನಾಯಕರನ್ನು ಹೊಗಳಿರುವುದು ಕುತೂಹಲ ಮೂಡಿಸಿದೆ.
ಅಷ್ಟೇ ಅಲ್ಲದೆ ಅವರು, ಮಾಜಿ ಸಿಎಂ ಕರುಣಾಕರನ್ ಹಾಗೂ ಹಿರಿಯ ಮಾರ್ಕ್ಸ್ವಾದಿ ಇಕೆ ನಾಯನಾರ್ ಅವರನ್ನು ತಮ್ಮ ‘ರಾಜಕೀಯ ಗುರುಗಳು’ ಎಂದು ಕರೆದುಕೊಂಡಿದ್ದಾರೆ. ಪುಂಕುನ್ನಮ್ನಲ್ಲಿರುವ ಮಾಜಿ ಕಾಂಗ್ರೆಸ್ ನಾಯಕ ಕರುಣಾಕರನ್ ಅವರ ‘ಮುರಳಿ ಮಂದಿರಂ’ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಸುರೇಶ್ ಗೋಪಿ ಸುದ್ದಿಗಾರರ ಜತೆ ಮಾತನಾಡಿದರು.
Father’s Day 2024: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ!
ಆಸಕ್ತಿಕರ ಸಂಗತಿಯೆಂದರೆ, ಸುರೇಶ್ ಗೋಪಿ ಅವರು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೆ ಕರುಣಾಕರನ್ ಅವರ ಮಗ ಹಾಗೂ ಕಾಂಗ್ರೆಸ್ ನಾಯಕ ಕೆ ಮುರಳೀಧರನ್ ಅವರನ್ನು ಸೋಲಿಸಿದ್ದರು. ಮುರಳೀಧರನ್ ಅವರು ಮೂರನೇ ಸ್ಥಾನ ಪಡೆದಿದ್ದರು. ಸಿಪಿಐನ ವಿಎಸ್ ಸುನೀಲ್ ಕುಮಾರ್ ಅವರು ಎರಡನೇ ಸ್ಥಾನ ಪಡೆದಿದ್ದರು. ಕರುಣಾಕರನ್ ಅವರ ಸ್ಮಾರಕಕ್ಕೆ ಭೇಟಿ ನೀಡಿರುವುದಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸದಂತೆ ಅವರು ಮಾಧ್ಯಮದವರಿಗೆ ಮನವಿ ಮಾಡಿದರು. ತಮ್ಮ ‘ಗುರು’ವಿಗೆ ವಂದನೆ ಸಲ್ಲಿಸಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು.