ಬೆಂಗಳೂರು:- ಬೆಂಗಳೂರಿನ ಜರಗನಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಮಾಡುವ ನೆಪದಲ್ಲಿ ವೈದ್ಯರೊಬ್ಬರು ಯುವತಿಯೊಬ್ಬರ ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಘಟನೆ ದಾಖಲಾಗಿದೆ.
3 ವರ್ಷದ ಕಂದಮ್ಮಳನ್ನು ವೇಲಿನಿಂದ ಕುತ್ತಿಗೆ ಬಿಗಿದು ಕೊಂದ ಪಾಪಿ ತಾಯಿ…!
ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಇದನ್ನು ರದ್ದು ಮಾಡುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ವೈದ್ಯರು ನಂಬಿಕೆಯನ್ನು ದುರುಪಯೋಗಪಡಿಸಿಕೊಂಡರೆ ವೈದ್ಯ ಮತ್ತು ರೋಗಿಯ ನಡುವಿನ ನಂಬಿಕೆಯ ಸಂಬಂಧ ಹದಗೆಡುತ್ತದೆ. ಅನಪೇಕ್ಷಿತ ಮತ್ತು ಸ್ಪಷ್ಟವಾದ ಲೈಂಗಿಕ ಪ್ರಚೋದನೆ ಕಂಡುಬಂದಿರುವುದರಿಂದ ವೈದ್ಯರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲಾಗದು ಎಂದು ಕೋರ್ಟ್ ಹೇಳಿದೆ.
ವೈದ್ಯರು ದೂರುದಾರರ ಬಳಿ ಆಕೆಯ ಶರ್ಟ್ ಮತ್ತು ಒಳ ಉಡುಪು ಬಿಚ್ಚುವಂತೆ ಹೇಳಿದ್ದಲ್ಲದೆ ಸ್ತನದ ಮೇಲೆ ಮುತ್ತು ನೀಡಿದ ಆರೋಪ ಎದುರಿಸುತ್ತಿದ್ದಾರೆ. ವೈದ್ಯರ ಈ ನಡತೆಯು ಐಪಿಸಿಯ ಸೆಕ್ಷನ್ 354ಎ(1)(i) ಅಡಿ ಅಪರಾಧವೆಂದು ಪರಿಗಣಿಸಲ್ಪಡುವ ಅಂಶಗಳಾಗಿರುತ್ತದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯು ಎದೆನೋವಿನಿಂದ ಬಳಲುತ್ತಿದ್ದು, ಜೆಪಿ ನಗರದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಕೆಗೆ ಚಿಕಿತ್ಸೆ ನೀಡಿದ ನಂತರ ಇಸಿಜಿ ಮತ್ತು ಎದೆಯ ಎಕ್ಸ್-ರೇ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದರು. ಅಲ್ಲದೆ, ವರದಿಗಳನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳುವಂತೆ ತಿಳಿಸಿದ್ದರು. ಆಕೆ ಕಳುಹಿಸಿದ ವರದಿಗಳನ್ನು ನೋಡಿದ ವೈದ್ಯರು ಮಾರ್ಚ್ 21 ರಂದು ಮಧ್ಯಾಹ್ನ 2 ಗಂಟೆಗೆ ಜರಗನಹಳ್ಳಿಯಲ್ಲಿರುವ ತನ್ನ ಕ್ಲಿನಿಕ್ಗೆ ಭೇಟಿ ನೀಡುವಂತೆ ಹೇಳಿದ್ದರು.
ಯುವತಿ ಕ್ಲಿನಿಕ್ಗೆ ಭೇಟಿ ನೀಡಿದಾಗ ವೈದ್ಯ ಮಾತ್ರ ಅಲ್ಲಿದ್ದರು. ಸಂತ್ರಸ್ತೆಯನ್ನು ಕೋಣೆಗೆ ಕರೆದೊಯ್ದು ಮಲಗಲು ಹೇಳಿದ ವೈದ್ಯ, ಆಕೆಯ ಎದೆಯ ಮೇಲೆ ಸ್ಟೆತಸ್ಕೋಪ್ ಇಟ್ಟು ಹೃದಯ ಬಡಿತ ಪರೀಕ್ಷಿಸಲು ಪ್ರಾರಂಭಿಸಿದ್ದಾರೆ. ನಂತರ ಆಕೆಯ ಬಳಿ ಶರ್ಟ್ ಮತ್ತು ಒಳ ಉಡುಪು ತೆಗೆಯಲು ಹೇಳಿದ್ದಾರೆ. ಐದು ನಿಮಿಷಗಳ ಪರೀಕ್ಷೆಯ ನಂತರ, ಕೈಗಳಿಂದ ಸ್ತನವನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾರೆ. ಬಳಿಕ ಸ್ತನಕ್ಕೆ ಮುತ್ತಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ವೈದ್ಯರ ಈ ನಡೆಯಿಂದ ಗಾಬರಿಗೊಂಡ ಆಕೆ ಕ್ಲಿನಿಕ್ನಿಂದ ಓಡಿಬಂದು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದರು. ಮರುದಿನ ಅವರು ಪುಟ್ಟೇನಹಳ್ಳಿ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು.