ಚಿತ್ರದುರ್ಗ, ಜೂ.12-ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹಗಳ ಕೊರತೆಯಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದ್ದು,ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಸರ್ಕಾರ ಹಲವಾರು ಯೋಜನೆಗಳಿಗೆ ಕೋಟ್ಯಾಂತರ ರೂ, ಖರ್ಚು ಮಾಡುತ್ತಿದೆ.ಲೋಕೋಪಯೋಗಿ, ಪೊಲೀಸ್ ಇಲಾಖೆ ಸೇರಿದಂತೆ, ಹಲವು ಇಲಾಖೆಗಳ ವಸತಿಗೃಹಗಳಿಗೆ ನೀಡಿದ ಆದ್ಯತೆ ಆರೋಗ್ಯ ಇಲಾಖೆಗೆ ನೀಡುತ್ತಿಲ್ಲ.ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿ ಪ್ರತಿದಿನ ನೂರಾರು ರೋಗಿಗಳ ಸೇವೆ ಮಾಡುವ ನೌಕರರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಆರೋಗ್ಯ ಇಲಾಖೆಯನ್ನು ನಿರ್ಲಕ್ಷ ಮಾಡುತ್ತಿದೆ.
ಬಗ್ಗೆ ಕಳೆದ 20 ವರ್ಷಗಳಿಂದಲೂ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿದಿನಗಳಾಗಲಿ ಗಮನಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿ ವಸತಿಗೃಹಗಳ ಕೊರತೆಯ ಜೊತೆಗೆ ಕೆಲವು ಮನೆಗಳು ವಾಸಿಸಲು ಯೋಗ್ಯವಿಲ್ಲ. ಹೀಗಾಗಿ ಬಹುತೇಕ ಸಿಬ್ಬಂದಿಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನು ಕೆಲವರು ಶಿಥಿಲಗೊಂಡಿರುವ ವಸತಿ ಗೃಹಗಳಲ್ಲೇ ವಾಸ ಮಾಡುತ್ತಿದ್ದು, ಯಾವಾಗ ಏನು ಅನಾಹುತ ಸಂಭವಿಸುತ್ತೋ ಎಂಬ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ದಿನದ 24 ಗಂಟೆ ಕೆಲಸ ನಿರ್ವಹಿಸುವ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು,ಕರ್ತವ್ಯದ ಸ್ಥಳದಲ್ಲೇ ವಾಸಿಸಬೇಕೆಂಬ ಸರ್ಕಾರದ ನಿಯಮವಿದೆ. ಆದರೆ, ಇಲ್ಲಿ ವಸತಿಗೃಹಗಳ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಿಲ್ಲದ ಕಾರಣ, ಆಸ್ಪತ್ರೆ ಸಿಬ್ಬಂದಿಗಳು ಬೇರೆ ಬೇರೆ ಕಡೆಗಳಲ್ಲಿ ವಾಸಿಸುವಂತಾಗಿದೆ.
ಇಲ್ಲಿ ಸುಮಾರು 40 ಕ್ಕೂ ಹೆಚ್ಚು ವಸತಿಗೃಹಗಳ ಅವಶ್ಯಕತೆ ಇದ್ದು, ಕೆಲವೇ ಕೆಲವು ಮನೆಗಳು ಮಾತ್ರ ವಾಸಿಸಲು ಯೋಗ್ಯವಾಗಿವೆ.ಆದ್ದರಿಂದ ಸಂಪೂರ್ಣ ಶಿಥಿಲಗೊಂಡಿರುವ ಮನೆಗಳನ್ನು ನೆಲಸಮಗೊಳಿಸಿ,ಹೊಸದಾಗಿ ನಿರ್ಮಿಸಿದರೆ ಸಾಕಷ್ಟು ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿಗಳು.
ಇನ್ನು,ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ರೇಣುಪ್ರಸಾದ್ ದೂರವಾಣಿ ಮೂಲಕ ಮಾತನಾಡಿ, ನಾನು ಈ ಹಿಂದೆ ಭೇಟಿ ಆಸ್ಪತ್ರೆಗೆ ಕೊಟ್ಟ ಸಂದರ್ಭದಲ್ಲಿ ಕೆಲವು ವಸತಿ ಗೃಹಗಳನ್ನು ವೀಕ್ಷಿಸಿದ್ದೇನೆ, ಅದರಲ್ಲಿ ಕೆಲವು ವಾಸಿಸಲು ಯೋಗ್ಯವಿದ್ದು, ಉಳಿದಂತೆ ಎಲ್ಲವನ್ನು ವೀಕ್ಷಿಸಲು ಸಾಧ್ಯವಾಗಿಲ್ಲ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಂದ ವರದಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು, ಆಸ್ಪತ್ರೆ ವಸತಿಗೃಹಗಳಲ್ಲಿ ಸೂಕ್ತ ಚರಂಡಿಗಳ ವ್ಯವಸ್ಥೆ ಇಲ್ಲದ ಕಾರಣ, ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು ಸೊಳ್ಳೆಗಳ ತಾಣವಾಗಿದ್ದು, ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಅಲ್ಲದೆ, ವಸತಿಗೃಹಗಳಿಗೆ ಪಟ್ಟಣ ಪಂಚಾಯಿತಿಯಿಂದ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ.
10-15 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದು,ಇದರಿಂದ ಸಿಬ್ಬಂದಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸ್ಪತ್ರೆ ವಸತಿಗೃಹ ಗಳ ಕೊರತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ವರದಿ :ಹನುಮಂತರಾಜು, ಚಿತ್ರದುರ್ಗ