ಬೆಂಗಳೂರು: ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವ ಅಧಿಕಾರ ತಹಸೀಲ್ದಾರ್ಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಈ ಅಧಿಕಾರವು ರಾಜ್ಯ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಇರುತ್ತದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತಮ್ಮ ತೀರ್ಪಿನಲ್ಲಿ, ತಹಸೀಲ್ದಾರ್ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
2015ರ ಜೂನ್ 30ರಂದು ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಬಿನ್ನಿಪೇಟೆಯ ಎಂ. ಗಾಯತ್ರಿ ಅವರು ನಾಯಕ ಸಮುದಾಯಕ್ಕೆ ಸೇರಿದ್ದಾರೆ ಎಂದು ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ವಿತರಿಸಿದ್ದರು. ಈ ಪತ್ರ ಆಧರಿಸಿ ಬಿಬಿಎಂಪಿ ಚುನಾವಣೆಗೆ ಗಾಯಿತ್ರಿ ಸ್ಪರ್ಧಿಸಿದ್ದರು. ಸಿವಿಲ್ ಹಕ್ಕುಗಳ ಜಾರಿ ನಿರ್ದೇಶನಾಲಯದ ಮುಂದೆ ದೂರು 2015ರ ಸೆಪ್ಟೆಂಬರ್ 5 ರಂದು ಸಲ್ಲಿಸಿದ್ದಾರೆ. ಮೋಸದಿಂದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಗಾಯಿತ್ರಿ ಅವರು ಪಡೆದಿದ್ದಾರೆ ಎಂದು ದೂರು ನೀಡಿದ್ದರು.
ಬೆಂಗಳೂರಿನ ಜಿಲ್ಲಾ ಜಾತಿ ಪರಿಶೀಲನ ಸಮಿತಿಗೆ ಈ ದೂರು ವರ್ಗಾವಣೆಯಾಗಿದ್ದು, ಅರ್ಜಿ ವಿಚಾರಣೆ ನಡೆಸಿದ್ದ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅವರು, ಗಾಯತ್ರಿ ಅವರಿಗೆ ವಿತರಿಸಿದ್ದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು 2018 ರ ಜೂ. 26ರಂದು ರದ್ದುಪಡಿಸಿ ಆದೇಶಿಸಿದ್ದರು. ಈ ಆದೇಶ ಆಧರಿಸಿ ಗಾಯತ್ರಿ ಅವರಿಗೆ ವಿತರಿಸಿದ್ದ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ 2020 ಸೆಪ್ಟಂಬರ್ 23ರಂದು ತಹಶೀಲ್ದಾರ್ ಆದೇಶಿಸಿದ್ದರು.
ಈ ಆದೇಶ ಪ್ರಶ್ನಿಸಿ ಗಾಯತ್ರಿ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದರು. ಆ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜಾತಿ ಪ್ರಮಾಣ ಪತ್ರ ರದ್ದತಿ ಪ್ರಶ್ನಿಸಿದ ಮೇಲ್ಮನವಿ ಪರಿಗಣಿಸುವ ಅಧಿಕಾರ ಉಪವಿಭಾಗಾಧಿಕಾರಿಗೆ ಇಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಹೊರಡಿಸಿದ್ದ ಆದೇಶದ ಅನುಸಾರ ಗಾಯತ್ರಿ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ. ಅದು ಬಿಟ್ಟು ಸ್ವತಂತ್ರವಾದ ವಿಚಾರಣೆ ನಡೆಸಿ ಆದೇಶ ಮಾಡಿಲ್ಲ. ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗಿಂತ ಕಡಿಮೆ ಶ್ರೇಣಿಯ ಹಾಗೂ ಅವರ ಅಧೀನದ ಅಧಿಕಾರಿಯಾಗಿದ್ದಾರೆ.
ಹೀಗಾಗಿ ಜಿಲ್ಲಾಧಿಕಾರಿ ಸಮಿತಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಡೆಸಲು ಉಪ ವಿಭಾಗಾಧಿಕಾರಿಗೆ ಅಧಿಕಾರವಿಲ್ಲ ಎಂದು ವಾದಿಸಿದ್ದರು. ತಹಶೀಲ್ದಾರ್ ಅವರಿಗೂ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿ ತಿರಸ್ಕರಿಸುವ ಅಥವಾ ಸಮ್ಮತಿಸುವ ಅಧಿಕಾರ ಇದೆಯೇ ಹೊರತು ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರ ಇಲ್ಲ. ಜಾತಿ ಪರಿಶೀಲನಾ ಸಮಿತಿ ಮಾತ್ರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸುವ ಅಧಿಕಾರ ಹೊಂದಿದೆ. ಈ ಅಧಿಕಾರವು ರಾಜ್ಯ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಇರುತ್ತದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತಮ್ಮ ತೀರ್ಪಿನಲ್ಲಿ, ತಹಸೀಲ್ದಾರ್ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.