ಬೆಂಗಳೂರು: ರಾಜ್ಯ ಸರಕಾರ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಸೂಕ್ತ ಪರಿಹಾರ ಸಿಗಬೇಕಾದರೆ ಫ್ರೂಟ್ಸ್ ಐಡಿ ಇರಲೇಬೇಕು. ಹೀಗಾಗಿ ಜಿಲ್ಲೆಯಲ್ಲಿ ಫ್ರೂಟ್ಸ್ ಐಡಿ ಮಾಡಿಸದ ಶೇ. 25 ರಷ್ಟು ರೈತರು ಬರ ಪರಿಹಾರ ಪಡೆಯಲು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 3,03,829 ಪ್ಲಾಟ್ಗಳ ರೈತರು ಫ್ರೂಟ್ಸ್ ಐಡಿ ಮಾಡಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಇಲ್ಲಿಯವರೆಗೆ 2,41,159 ಪ್ಲಾಟ್ಗಳ ರೈತರು ತಮ್ಮ ಫ್ರೂಟ್ಸ್ ಐಡಿ ಮಾಡಿಸಿಕೊಂಡಿದ್ದಾರೆ. ಬಾಕಿ ಉಳಿದ 62,670 ಪ್ಲಾಟ್ಗಳ ರೈತರು ಇನ್ನೂ ಐಡಿ ಮಾಡಿಸಿಲ್ಲ.
ಎಫ್ಐಡಿ ಏಕೆ ಮಾಡಿಸಬೇಕು?
ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಎಲ್ಲ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರಿಗೆ ಎಫ್ಐಡಿ ಕಡ್ಡಾಯವಾಗಿದೆ. ಇದನ್ನು ಕೃಷಿ ಇಲಾಖೆಯಿಂದ ಮಾಡಿಸಬೇಕು. ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯ ಸೌಲಭ್ಯ ಪಡೆಯಲು ಈ ನಂಬರ್ ಅವಶ್ಯ.ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಎಫ್ಐಡಿ ಮಾಡಿಸದವರು ಸಮೀಪದ ರೈತ ಸೇವಾ ಕೇಂದ್ರಕ್ಕೆ ಹೋಗಿ ಎಫ್ಐಡಿ ಮಾಡಿಸಿಕೊಳ್ಳಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
IAF Recruitment 2024: ಭಾರತೀಯ ವಾಯುಪಡೆಯಲ್ಲಿ ಭರ್ಜರಿ ಉದ್ಯೋಗವಕಾಶ..! ತಿಂಗಳಿಗೆ ಸಂಬಳ 56,000
ಈಗಲೂ ಐಡಿ ಮಾಡಿಸಿ:
ಇನ್ನು ಕೆಲ ರೈತರಿಗೆ ಎಫ್ಐಡಿ ಎಂದರೇನು? ಇದು ಏಕೆ ಪ್ರಯೋಜನವಾಗುತ್ತದೆ ಎಂಬುದು ತಿಳಿದಿಲ್ಲ. ಇದು ರೈತರಿಗಾಗಿ ಮಾಡಿರುವ ಪೋರ್ಟಲ್ ಆಗಿದೆ. ಕೃಷಿ ಜಮೀನಿನ ಮಾಹಿತಿಯನ್ನು ಇದರಲ್ಲಿ ನೀಡಲಾಗುತ್ತದೆ. ಈ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಾಗ ರೈತರಿಗೆ ಎಫ್ಐಡಿ ನಂಬರ್ ಲಭ್ಯವಾಗುತ್ತದೆ. ಇಲ್ಲಿ ಒಮ್ಮೆ ಎಫ್ಐಡಿ ನಂಬರ್ ಪಡೆದರೆ,
ಆ ರೈತರ ಸಂಪೂರ್ಣ ಜಮೀನಿನ ಮಾಹಿತಿ ಇಲ್ಲಿ ಸಿಗುತ್ತದೆ. ಹೀಗಾಗಿ ಫ್ರೂಟ್ಸ್ ಐಡಿ ಆಗದಿರುವ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಎಲ್ಲ ಜಮೀನುಗಳ ಪಹಣಿ, ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ ಕೊಟ್ಟು ಫ್ರೂಟ್ಸ್ ಐಡಿ ಮಾಡಿಸಬೇಕು. ಇದರಿಂದ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ಹಣ ಪಡೆದುಕೊಳ್ಳಲು ಹಾಗೂ ಕೃಷಿ ಇಲಾಖೆಯ ಇತರ ಸವಲತ್ತು ಪಡೆಯಲು ಸಹಾಯಕವಾಗಲಿದೆ.