ಬೆಂಗಳೂರು: ಅದು ಗ್ರಾಮ ದೇವತೆಗಳ ಊರಹಬ್ಬ, ಇಡೀ ಗ್ರಾಮದ ತುಂಬೆಲ್ಲಾ ಸಡಗರ ಸಂಭ್ರಮ ಮನೆ ಮಾಡಿತ್ತು. ಗ್ರಾಮದಲ್ಲೆಲ್ಲ ವಿದ್ಯುತ್ ದೀಪಾಲಂಕಾರ ಮಾಡಿ ಮನೆಗಳ ಮುಂದೆ ರಂಗೋಳಿ ಬಿಡಿಸಿ ತಳಿರುತೋರಣಗಳಿಂದ ಸಿಂಗಾರಿಸಲಾಗಿತ್ತು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಆದ್ರೆ ಆ ಹಬ್ಬದ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ ಅಲ್ಲಿ ನಡೆದ ಅದೊಂದು ದುರ್ಘಟನೆ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿತ್ತು. ಅಷ್ಟಕ್ಕೂ ಅಲ್ಲಿ ನಡೆದಿದ್ದಾದ್ರು ಏನು ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ…
ತಿನ್ನೋ ಆಹಾರದ ಮೇಲೆ ನೊಣ ಹರಡುತ್ತಿದ್ರೆ ಎಚ್ಚರ ವಹಿಸಿ.. ದೇಹಕ್ಕೆ ಎಷ್ಟೆಲ್ಲಾ ಬ್ಯಾಕ್ಟೀರಿಯಾ ಹೋಗುತ್ತೆ ಗೊತ್ತಾ!?
ಹೀಗೆ ಟ್ರಾಕ್ಟರ್ ನಲ್ಲಿದ್ದ ಪಲ್ಲಕ್ಕಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಧಗಧಗಿಸುತ್ತಿರುವ ಬೆಂಕಿ.. ಇನ್ನೊಂದೆಡೆ ವಿದ್ಯುಕ್ ಶಾಕ್ ನಿಂದ ಗಾಯಗೊಂಡಿದ್ದವರನ್ನ ರಕ್ಷಣೆ ಮಾಡುತ್ತಿರುವ ಅಗ್ನಿಶಾಮಕ ಸಿಬ್ಬಂದಿ. ಹೌದು ದೇವರ ಪಲ್ಲಕ್ಕಿಯ ಟ್ರಾಕ್ಟರ್ ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿ ಬಳಿ ನಡೆದಿದೆ. ವೀರಸಂದ್ರ ಗ್ರಾಮದ ನಿವಾಸಿ ರಂಗನಾಥ (33), ಯಾರಂಡಹಳ್ಳಿ ಗ್ರಾಮದ ನಿವಾಸಿ ಹರಿಬಾಬು (25) ಮೃತ ದುದೈವಿಗಳಾಗಿದ್ದಾರೆ. ಗೊಲ್ಲಹಳ್ಳಿ ಗ್ರಾಮದ ಜಾತ್ರೆ ಪಲ್ಲಕಿ ಉತ್ಸವದ ವೇಳೆ ಅವಘಡ ಸಂಭವಿಸಿದೆ. ಗ್ರಾಮದ ಕಾವೇರಮ್ಮ ಪಲ್ಲಕ್ಕಿ ಉತ್ಸವಕ್ಕೆ ಬಂದಿದ್ದ ಟ್ರಾಕ್ಟರ್ ಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಈ ವೇಳೆ ಟ್ರಾಕ್ಟರ್ ಚಾಲಕ ಮತ್ತು ಆತನನ್ನು ರಕ್ಷಣೆಗೆ ಧಾವಿಸಿದ್ದ ಮತ್ತೋರ್ವ ಯುವಕನಿಗೆ ವಿದ್ಯುತ್ ಶಾಕ್ ತಗುಲಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಇಬ್ಬರನ್ನು ರಕ್ಷಣೆ ಮಾಡುವ ಕಾರ್ಯ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ನಡುವೆ ಇಬ್ಬರು ಕೊನೆಯುಸಿರೆಳೆದಿದ್ದಾರೆ.
ಇನ್ನೂ ಗೊಲ್ಲಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಗ್ರಾಮದೇವತೆಗಳ ಊರಹಬ್ಬದ ಜಾತ್ರಾ ಮಹೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಕಾವೇರಮ್ಮ ದೇವಾಲಯದ ವತಿಯಿಂದ ಟ್ರಾಕ್ಟರ್ ಮೂಲಕ ಪಲ್ಲಕ್ಕಿಯನ್ನ ಕರೆಸಲಾಗಿತ್ತು. ಗ್ರಾಮದಲ್ಲಿ ಪಲ್ಲಕ್ಕಿ ಹೊತ್ತ ಟ್ರಾಕ್ಟರ್ ಬರುವಾಗ ಅವೈಜ್ಞಾನಿಕವಾಗಿ ಹಾಕಿದ್ದ 11 ಕೆವಿ ವಿದ್ಯುತ್ ತಂತಿ ಟ್ರಾಕ್ಟರ್ಗೆ ಸ್ಪರ್ಶಿಸಿದೆ. ರಸ್ತೆಯಲ್ಲಿ ನಿಯಮಾನುಸಾರ ಇಂತಿಷ್ಟು ಎತ್ತರಕ್ಕೆ ಇರಬೇಕಾದ ವಿದ್ಯುತ್ ತಂತಿಯನ್ನ ತುಂಬಾ ಕೆಳಭಾಗದಲ್ಲಿ ಹಾಕಲಾಗಿತ್ತು. ವಿದ್ಯುತ್ ತಂತಿಗಳನ್ನ ಸರಿಪಡಿಸುವಂತೆ ಸ್ಥಳೀಯರು ಸಾಕಷ್ಟು ಬಾರಿ ಎಲೆಕ್ಟ್ರಾನಿಕ್ ಸಿಟಿ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದ್ರೆ ಬೆಸ್ಕಾಂ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದಾಗಿ ಇಂದು ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನೂ ಘಟನೆ ನಡೆದ ಸ್ಥಳ ಪರಿಶೀಲನೆಗೆ ಬಂದಿದ್ದ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮಾಧ್ಯಮಗಳ ಕ್ಯಾಮರಾ ಕಂಡ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅಷ್ಟೇ ಅಲ್ಲದೆ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ಮಾಡದಂತೆ ಮಾಧ್ಯಮಗಳ ಕ್ಯಾಮರಾಗೆ ಬೆಸ್ಕಾಂ ಅಧಿಕಾರಿ ಅಡ್ಡಗಟ್ಟಿ ಗೂಂಡಾವರ್ತನೆ ತೋರಿದ್ದಾರೆ.
ಒಟ್ಟಿನಲ್ಲಿ ನೆನ್ನೇಯಷ್ಟೇ ಕೆಪಿಟಿಸಿಎಲ್ ಘಟಕದಲ್ಲಿ ಬೆಸ್ಕಾಂ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಎಲೆಕ್ಟ್ರಾನಿಕ್ ಸಿಟಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿದ್ದು ಮಾತ್ರ ದುರಂತ.