ಬೀದರ್ (ಜೂ.01): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟಿದೆ. ಭಯ ಭೀತಿ ಇಲ್ಲದೇ ಕೆಲವು ದುಷ್ಕೃತ್ಯಗಳು ನಡೆಯುತ್ತಿವೆ. ಸರ್ಕಾರ ಟೈಟ್ ಇದ್ರೆ ಆಡಳಿತ ಚನ್ನಾಗಿರುತ್ತೆ. ರಾಜ್ಯದಲ್ಲಿ ಸರ್ಕಾರವೇ ಟೈಟ್ ಇಲ್ಲ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು. ಬೀದರ್ ನಗರದಲ್ಲಿ ಶನಿವಾರ ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನನಿತ್ಯ ಅಹಿತಕರ ಘಟನೆಗಳು ನಡೆಯುತ್ತಿವೆ. ಅವುಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಮ್ಮೆ ಮೋದಿ ಸರ್ಕಾರ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ:
ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಕರ್ನಾಟಕದಲ್ಲಿನ ನಿರೀಕ್ಷಿತ ಫಲಿತಾಂಶದಲ್ಲಿ ಕೂಡ ಜಾಸ್ತಿ ಏನು ವ್ಯತ್ಯಾಸ ಆಗುವುದಿಲ್ಲ. ನಾವು 28ಕ್ಕೆ 28 ಗೆಲ್ಲುವ ನಿರೀಕ್ಷೆ ನಮಗೆ ಇದೆ. ಒಂದೆರಡು ಸೀಟು ಆಚೆ – ಈಚೆ ಆಗಬಹುದು.ಕಾಂಗ್ರೆಸ್ ನವ್ರು ಗ್ಯಾರಂಟಿ ಮೇಲೆ ಚುನಾವಣೆ ಮಾಡಿದ್ದಾರೆ. ದುಡ್ಡು ಕೂಡ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ಸೋಲು ಅನುಭವಿಸಿದರೇ ಅದರ ಹೊಣೆಯನ್ನು ಎಲ್ಲಾ ಕಾಂಗ್ರೆಸ್ ನಾಯಕರು ಹೊತ್ತುಕೊಳ್ಳಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಎಸ್ಟಿ ನಿಗಮದಲ್ಲಿ ಆಗಿರುವ ಅವ್ಯವಹಾರವೇ ಕಟಾಕಟ್ ಆ..!?
ಪಬ್ಲಿಕ್ ದುಡ್ಡು ತೆಲಂಗಾಣಕ್ಕೆ ಕಳಿಸಿರುವುದೇ ಕಟಾಕಟ್ ಆ..? ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಹಣ ವರ್ಗಾವಣೆ ಮಾಡಿರುವುದರಿಂದ ಜನ ಸಂದೇಹದಲ್ಲಿ ಇದ್ದಾರೆ. ಸಿಐಡಿಗೆ ಕೊಟ್ಟಿದ್ದ ತನಿಖೆಯನ್ನು ಈಗ ಎಸ್ಐಟಿಗೆ ಕೊಟ್ಟಿರುವುದು ಯಾಕೆ.? ಸಿಐಡಿ ಅಧಿಕಾರಿಗಳ ಮೇಲೆ ಅವರಿಗೆ ನಂಬಿಕೆ ಇಲ್ಲವೇ ಎಂದು ಬಂಡೆಪ್ಪ ಖಾಶೆಂಪುರ್ ರವರು ಪ್ರಶ್ನಿಸಿದರು.
ಎಸ್ಟಿ ಫಂಡ್ ತೆಲಂಗಾಣಕ್ಕೆ ಹೋಗಿರುವುದು ಸಂದೇಹಾಸ್ಪದವಾಗಿದೆ. ಚುನಾವಣೆ ಸಂದರ್ಭದಲ್ಲಿ ತುರ್ತು ಕೆಲಸಗಳಿಗೆ ಮಾತ್ರ ದುಡ್ಡು ಖರ್ಚು ಮಾಡಬೇಕು. ಅದು ಕುಡಿಯುವ ನೀರಿನ ಸಮಸ್ಯೆಗಳಿಗೆ ಹಣ ಖರ್ಚು ಮಾಡಬಹುದು. ಆದರೇ ನೀತಿ ಸಂಹಿತೆ ನಡುವೆಯೇ ಕೋಟ್ಯಾಂತರ ರೂ. ಹಣ ವರ್ಗಾವಣೆ ಆಗಿರುವುದು ಸಂಶಯ ಮೂಡುವಂತೆ ಮಾಡಿದೆ ಎಂದರು.
ಕಾಂಟ್ರಾಕ್ಟರ್ ಬಾಕಿಯನ್ನು ಸರ್ಕಾರ ಕೂಡಲೇ ಪಾವತಿ ಮಾಡಬೇಕು:
ಲ್ಯಾಂಡ್ ಆರ್ಮಿ ಕಾಂಟ್ರಾಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಟ್ರಾಕ್ಟರ್ ಗಳ ಬಾಕಿಯನ್ನು ಸರ್ಕಾರ ಕೂಡಲೇ ಪಾವತಿ ಮಾಡಬೇಕು.ಹಿಂದೆ ಕಾಂಗ್ರೆಸ್ ನವ್ರು ಪರ್ಸೆಂಟೆಜ್ ಆರೋಪ ಮಾಡಿದ್ದರು. ಈಗ ರಾಜ್ಯದಲ್ಲಿ ಏನ್ ನಡಿತಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಪ್ರಶ್ನಿಸಿದರು. ತನಿಖೆ, ವಿಚಾರಣೆ ನೆಪದಲ್ಲಿ ಸರ್ಕಾರ ಕಾಲಹರಣ ಮಾಡಬಾರದು. ಸರ್ಕಾರ ಎಲ್ಲಿಗೆ ಹೋಗುತ್ತಿದೆ. ಇಂತಹ ವಿಷಯಗಳನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಸ್ಟಿ ನಿಗಮದಲ್ಲಿನ ಭ್ರಷ್ಟಾಚಾರದ ತನಿಖೆ ಸಿಬಿಐಗೆ ವಹಿಸಬೇಕು ಎಂದರು.
ಯಾಗದ ಬಗ್ಗೆ ಅವರಿಗೆ ಚನ್ನಾಗಿ ಗೊತ್ತಿದೆ:
ನಮ್ಮ ಪಕ್ಷದ ವರಿಷ್ಠರು ಯಾವುದೇ ರೀತಿಯ ಯಾಗ ಮಾಡಿಲ್ಲ. ಮಾಡೋದು ಇಲ್ಲ. ಯಾಗದ ಬಗ್ಗೆ ಯಾರು ಮಾತಾಡುತ್ತಿದ್ದಾರೆಯೋ ಅವರಿಗೆ ಅದರ ಬಗ್ಗೆ ಚನ್ನಾಗಿ ಗೋತ್ತಿರುತ್ತದೆ. ಅವರಿಗೆ ಕೇರಳದಿಂದ ಯಾಗ ಮಾಡಿಸಿದ ಅನುಭವ ಇರಬಹುದು. ಸರ್ಕಾರವೇ ಅವರದ್ದು ಇದೆ. ಅದರ ಬಗ್ಗೆ ಸತ್ಯ ಹೇಳಲಿ ಎಂದರು.ಪ್ರಜ್ವಲ್ ರೇವಣ್ಣ, ಹೆಚ್.ಡಿ ರೇವಣ್ಣರ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.
ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ. ಕುಮಾರಸ್ವಾಮಿರವರು ತಮ್ಮ ಕುಟುಂಬದ ಜೊತೆಗೆ ಕಬಿನಿಗೆ ಹೋಗಿದ್ದಾರೆ ಅಷ್ಟೇ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರೇವಣ್ಣ, ಕುಮಾರಣ್ಣರವರ ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ಅವರೆಲ್ಲ ಅಣ್ಣ – ತಮ್ಮಂದಿರು ಚನ್ನಾಗಿದ್ದಾರೆ. ಏನು ಸಮಸ್ಯೆ ಇಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಿದರು.