ಮೈಸೂರು : ನನ್ನ ಬಳಿಯಿರುವ ಭ್ರಷ್ಟಾಚಾರದ ಮಾಹಿತಿಯ ಪೆನ್ಡ್ರೈವ್ ನಿಮಗೆ ಕೊಡುತ್ತೇನೆ. ಅದರ ವಿರುದ್ಧ ಕ್ರಮ ತೆಗದುಕೊಳ್ಳುವ ತಾಕತ್ತು ಇದೆಯಾ? ನಿಮಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಹಣ ಹೊಂದಿಸಲು ಯಾವ ರೀತಿ ಪರದಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ.
ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ? ಸಿಎಂ ನನ್ನನ್ನ ಹಿಟ್ ಅಂಡ್ ರನ್ ಅನ್ನುತ್ತಾರೆ. ಈ ಹಿಂದೆ ದಾಖಲೆಗಳ ಸಮೇತ ನಾನು ಮಾಡಿದ ಆರೋಪಗಳಿಗೆ ಎಷ್ಟು ಕ್ರಮ ಕೈಗೊಂಡಿದ್ದಾರೆ. ಕ್ರಮ ತೆಗೆದುಕೊಳ್ಳಲು ಈ ಸರ್ಕಾರದಿಂದ ಸಾಧ್ಯವಿಲ್ಲ. ಅದಕ್ಕಾಗಿ ನಾನು ಪೆನ್ ಡ್ರೈವ್ ಕೊಡುತ್ತಿಲ್ಲ ಎಂದು ಹೇಳಿದರು.
ಇನ್ನು, ತಿಮಿಂಗಲ ಗೃಹ ಸಚಿವ ಜಿ ಪರಮೇಶ್ವರ್ ಅವರ ಪಕ್ಕದಲ್ಲೇ ಕುಳಿತಿದೆ. ತಿಮಿಂಗಲ ಯಾರು ಅನ್ನೋದು ಪರಮೇಶ್ವರ್ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ತಿಮಿಂಗಲವನ್ನು ಹಿಡಿಯೋದು ಬಿಟ್ಟು ನನ್ನನ್ನು ಕೇಳಿದರೇ ಹೇಗೆ. ಎಸ್ಐಟಿಯನ್ನು ಕಾಣದ ಕೈ ನಿಯಂತ್ರಿಸುತ್ತಿದೆ. ಅವರದೇ ಮಂಡ್ಯ ಶಾಸಕ ಒಂದು ವಾರದಲ್ಲಿ ತಿಮಿಂಗಲ ಸಿಗುತ್ತೆ ಎಂದು ಹೇಳಿದರು. ಏನಾಯಿತು ಎಂದು ಪ್ರಶ್ನಿಸಿದರು.
ಇನ್ನು, ತಿಮಿಂಗಲವನ್ನು ಎಚ್ಡಿ ಕುಮಾರಸ್ವಾಮಿ ನುಂಗಿಕೊಳ್ಳಲಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಮಯ ಬರಲಿ ನುಂಗಿದರೇ ಆಯಿತು. ಎಸ್ಐಟಿ ಅಧಿಕಾರಿಗಳು ಗೃಹ ಸಚಿವರಿಗೆ ಮಾಹಿತಿ ಕೊಡುತ್ತಿಲ್ಲ. ಬೇರೆಯವರಿಗೆ ಮಾಹಿತಿ ಕೊಡುತ್ತಿದ್ದಾರೆ. ಎಸ್ಐಟಿ ತನಿಖೆ ಸರಿಯಾಗಿ ಆಗುತ್ತಿಲ್ಲ. ನಿಮ್ಮ ತಂದೆ – ತಾಯಿ, ಸಹೋದರ – ಸಹೋದರಿಯ ಮುಖ ನೋಡಿಕೊಂಡು ತನಿಖೆ ಮಾಡಿ. ನೊಂದ ಹಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ ಎಂದು ಎಸ್ಐಟಿ ಕಿರಿಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರು.