ಬೆಂಗಳೂರು: ಪ್ರಜ್ವಲ್ ಪ್ರಕರಣದಲ್ಲಿ ಮಾಹಿತಿ ಕೊಟ್ಟವರನ್ನೇ ಬಂಧಿಸಲಾಗುತ್ತಿದೆ. ಎಸ್ಐಟಿ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಮಾಜಿ ಸಿಎಂ ಹಾಗು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದಲ್ಲಿ ಮಾಹಿತಿ ಕೊಟ್ಟವರನ್ನೇ ಬಂಧಿಸಲಾಗುತ್ತಿದೆ.
ಎಸ್ಐಟಿ ತನಿಖೆ ದಿಕ್ಕು ತಪ್ಪುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಮರ್ಥನೆ ಮಾಡುವುದಿಲ್ಲ. ಆದರೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೆಲ್ಲರ ಹೆಸರು ಕೇಳಿಬಂದಿದೆಯೋ ಅವರೆಲ್ಲರ ವಿಚಾರಣೆಯಾಗಬೇಕು. ಅಪರಾಧಿಗಳನ್ನು ಅವರು ಬಂಧಿಸ್ತಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದರೆ ಸಿಬಿಐಗೆ ವಹಿಸಲಿ ಎಂದರು.
ಇನ್ನು ಪರಿಷತ್ ಚುನಾವಣೆಗೆ ಟಿಕೆಟ್ ಘೋಷಣೆಯಾಗಿದೆ. ಕೆಲವರ ಅಸಮಾಧಾನ ಸಹಜ. ಪರಿಷತ್ಗೆ ಹಲವರು ಆಕಾಂಕ್ಷಿಗಳಿದ್ದರು. ಟಿಕೆಟ್ ಕೈತಪ್ಪಿದಾಗ ಸಹಜವಾಗಿಯೇ ಬೇಸರ ಆಗುತ್ತದೆ. ನಂತರದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಮೈತ್ರಿ ಬಗ್ಗೆ ವರಿಷ್ಠರು ಯಾವ ರೀತಿ ತೀರ್ಮಾನ ಮಾಡಿದ್ದಾರೋ ಅದರಂತೆ ಎಲ್ಲವೂ ನಡೆಯುತ್ತದೆ ಎಂದು ತಿಳಿಸಿದರು.