ಬಾಗಲಕೋಟೆ :-ನರಗುಂದ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಶಾಂತಿಯುತವಾಗಿ ಮತದಾನ ನಡೆದ ಬಗ್ಗೆ ವರದಿಯಾಗಿದೆ.
ಸಂಜೆ 6ರ ನಂತರ ಅಂದಾಜು ಶೇ.72.64 ರಷ್ಟು ಮತದಾನವಾಗಿದೆ. ಮುಧೋಳ – ಶೇ.76.35, ತೇರದಾಳ ಶೇ.77.02, ಜಮಖಂಡಿ ಶೇ.72.93, ಬೀಳಗಿ ಶೇ. 74.51, ಬಾಗಲಕೋಟೆ ಶೇ.66.16, ಬಾದಾಮಿ ಶೇ.71.84, ಹುನಗುಂದ ಶೇ. 68.02, ನರಗುಂದ ಶೇ. 75.29
ಬೆಳಿಗ್ಗೆಯಿಂದಲೇ ಮೃದ್ದರು, ವಿಶೇಷ ಚೇತನರು, ಮಹಿಳೆಯರು, ಯುವ ಮತದಾರರು ಉತ್ಸುಕರಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿರುವುದು ಕಂಡುಬಂದಿತು. ಬಹುತೇಕ ಮತಗಟ್ಟೆಗಳಲ್ಲಿ ಮಹಿಳಾ ಮತದಾರರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದ್ದು, ಮತದಾರರಿಗೆ ವಿಶ್ರಾಂತಿ ಕೊಠಡಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಪುರುಷ ಮತದಾರರಕ್ಕಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವ ದೃಷ್ಯ ಮಾದ್ಯಮ ತಂಡ ಮತದಾನದ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಕಂಡುಬಂದಿತು.
G.Parameshwar: ಮುಖ್ಯಮಂತ್ರಿ ಆಗಿದ್ದವರು SIT ಮೇಲೆ ಅನುಮಾನ ಪಟ್ಟರೆ ಹೇಗೆ?: ಪರಮೇಶ್ವರ್
ಬೀಳಗಿ ಮತಕ್ಷೇತ್ರದ ಹೂಲಗೇರಿ ಗ್ರಾಮದಲ್ಲಿ ಮ.ಸಂ.220 ರಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಒಟ್ಟು 222 ಜನ ಮತ ಚಲಾವಣೆಗೊಂಡಿದ್ದವು. ಅದರಲ್ಲಿ 110 ಪುರುಷರು, 112 ಜನ ಮಹಿಳೆಯರು ಮತ ಚಲಾಯಿಸಿದ್ದರು. ಮ.ಸಂ221 ರಲ್ಲಿ 691 ಪೈಕಿ 281, ಬಾದಾಮಿ ಮತಕ್ಷೇತ್ರದ ಕಟಗೇರಿ ಮ.ಸಂ.7ರಲ್ಲಿ 12 ಗಂಟೆ ಅವಧಿಯಲ್ಲಿ 784 ಪೈಕಿ 259, ಮ.ಸಂ.5ರಲ್ಲಿ 908 ಮತದಾರರ ಪೈಕಿ 282, ಮ.ಸಂ.6ರಲ್ಲಿ 807 ಪೈಕಿ 254, ತಿಮ್ಮಸಾಗರದಲ್ಲಿ ಮಸಂ.15ರಲ್ಲಿ 856 ಪೈಕಿ 302, ಮಸಂ.16 ರಲ್ಲಿ 508 ಪೈಕಿ 241, ಲಿಂಗಾಪೂರ ಗ್ರಾಮದ ಮಸಂ.12 ರಲ್ಲಿ 1057 ಪೈಕಿ 347 ಮತ ಚಲಾವಣೆಗೊಂಡಿದ್ದವು. ಅದರಲ್ಲ್ಲಿ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತ ಚಲಾಯಿಸಿರುವ ಬಗ್ಗೆ ವರದಿಯಾಗಿರುವುದು ಕಂಡುಬಂದಿತು.
ಬೆಳಿಗ್ಗೆ 7 ರಿಂದ 9 ಗಂಟೆಯಲ್ಲಿ ಶೇ.8.59 ರಷ್ಟು ಮತದಾನವಾದರೆ, 11 ವರೆಗೆ ಶೇ.23.80 ರಷ್ಟು, ಮಧ್ಯಾಹ್ನ 1 ವರೆಗೆ ಶೇ.42.01 ರಷ್ಟು, ಮಧ್ಯಾಹ್ನ 3 ವರೆಗೆ 55.15 ರಷ್ಟು, ಸಂಜೆ 5 ವರೆಗೆ ಶೇ.67.57 ರಷ್ಟು ಮತದಾನವಾಗಿರುವ ವರದಿಯಾಗಿದ್ದು ಕಂಡುಬಂದಿತು. ಸಂಜೆ 5 ಗಂಟೆಯ ವರದಿಯಲ್ಲಿ ಜಿಲ್ಲೆಯ ಏಳು ಮತಕ್ಷೇತ್ರಗಳ ಪೈಕಿ ತೇರದಾಳ ಮತಕ್ಷೇತ್ರದಲ್ಲಿ ಹೆಚ್ಚು ಮತದಾನವಾದರೆ, ಬಾಗಲಕೋಟೆ ಮತಕ್ಷೇತ್ರದಲ್ಲಿ ಕಡಿಮೆ ಮತದಾನವಾದ ವರದಿಯಾಗಿದೆ.
ಮುಕ್ತ, ಶಾಂತಿಯುವ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮಕೈಗೊಂಡಿತ್ತು. ಮತದಾನ ಕಾರ್ಯಕ್ಕೆ 9274 ಮತಗಟ್ಟೆ ಸಿಬ್ಬಂದಿಗಳು ಹಾಗೂ 1519 ಪೊಲೀಸ್ ಸಿಬ್ಬಂದಿ, 418 ಹೋಮ ಗಾರ್ಡ, 3 ಕೆ.ಎಸ್.ಆರ್.ಪಿಯ 85 ಸಿಬ್ಬಂದಿಗಳು ಸೇರಿ ಒಟ್ಟು 3500 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. 1683 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಸಹ ಮಾಡಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದ ವರದಿಯಾಗಿದೆ.
ಡಿಸಿ, ಸಿಇಓ ವಿಶೇಷ ಮತಗಟ್ಟೆಗಳಿಗೆ ಭೇಟಿ ; ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಬಾಗಲಕೋಟೆ ನವನಗರದ ಮಸಂ.166 ಮತ್ತು 179 ರಲ್ಲಿ ಸ್ಥಾಪಿಸಲಾದ ಮಹಿಳಾ ಸಖಿ ಮತಗಟ್ಟೆಗಳಿಗೆ ತೆರಳಿ ಮತಗಟ್ಟೆ ಮತ್ತು ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು. ಜಿ.ಪಂ ಸಿಇಓ ಶಶಿಧರ ಕುರೇರ ಮುಚಖಂಡಿ ಎಲ್.ಟಿ-1ರಲ್ಲಿ ಸ್ಥಾಪಿಸಲಾದ ಸಾಂಪ್ರದಾಯಿಕ ಮತಗಟ್ಟೆ, ಬದಾಮಿ ತಾಲೂಕಿನ ಸೂಳಿಕೇರಿ, ಬಾದಾಮಿ, ಚೊಳಚಗುಡ್ಡ, ಗುಡೂರ, ಇಲಕಲ್ಲ, ಹುನಗುಂದ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ಯುವ ಮತದಾರರಲ್ಲಿ ಉತ್ಸಾಹ ; 18 ವರ್ಷ ಪೂರೈಸಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕರಲ್ಲಿ ಉತ್ಸಾಹ ಕಂಡುಬಂದಿತು. ತಮ್ಮ ಗುರುತಿನ ಚೀಟಿಯೊಂದಿಗೆ ಖುಷಿಯಿಂದ ಮತಗಟ್ಟೆಗೆ ಆಗಮಿಸಿದ ಮತದಾರರು ಮೊದಲ ಬಾರಿಗೆ ನಮ್ಮ ಹಕ್ಕನ್ನು ಚಲಾಯಿಸುತ್ತಿರುವುದು ಸಂತೋಷ ತಂದಿದೆ. ಜನಪ್ರತಿನಿಧಿಗಳ ಆಯ್ಕೆಯಲ್ಲಿ ನಮ್ಮದು ಇರುವ ಪಾತ್ರದ ಬಗ್ಗೆ ಅರಿತಿರುವುದಾಗಿ ಯುವ ಮತದಾರರು ತಮ್ಮ ಅನಿಸಿಕಿಯನ್ನು ವ್ಯಕ್ತಪಡಿಸಿದರು. ಸುನಗ ಗ್ರಾಮದ ವೈಷ್ಣವಿ ನಾಗರಾಜ ಬೆಂಗಳೂರಿನಿಂದ ಆಗಮಿಸಿ ಮತದಾನ ಮಾಡಿದರು. ವಿದ್ಯಾಗಿರಿಯ ಪ್ರಮೋದಿನಿ ಗೌಡ, ಹುನಗುಂದ ತಾಲೂಕಿನ ಸೂಳಿಭಾವಿಯ ವಿಜಯಲಕ್ಷ್ಮೀ ಬಳಬಟ್ಟಿ, ಶೃಷ್ಟಿ ಬಾರಕೇರ, ರಂಜಿತಾ ಕಳಸಾಮಠ, ಬಾಗ್ಯಶ್ರೀ ಕಳಸಾಮಠ, ವಿದ್ಯಶ್ರೀ ಕಳಸಾಮಠ ಮೊದಲ ಬಾರಿಗೆ ಮತ ಚಲಾಯಿಸಿದ ಯುವ ಮತದಾರರು.
ಪತ್ನಿ ಸಮೇತ ಸಿಇಓ ಕುರೇರ ಮತ ಚಲಾವಣೆ ; ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿ.ಪಂ ಸಿಇಓ ಶಶಿಧರ ಕುರೇರ ಪತ್ನಿ ಸುಚಿತಾ ಅವರ ಸಮೇತರಾಗಿ ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಸಹ ಇದೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಮತಚಲಾಯಿಸಿದ ನಂತರ ಇತರೆ ಮಹಿಳಾ ಮತದಾರರು ಜಿಲ್ಲಾಧಿಕಾರಿಗಳೊಂದಿಗೆ ಪೋಟೋ ತೆಗೆಸಿಕೊಂಡರು.
ವೃದ್ದರು, ವಿಕಲಚೇನರು, ತೃತಿಯ ಲಿಂಗದವರಿಂದ ಮತದಾನ ; ಮೃದ್ದರು, ವಿಶೇಷ ಚೇತನರು ಹಾಗೂ ತೃತಿಯ ಲಿಂಗದ ಮತದಾರರು ಉತ್ಸುಕರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಮತದಾನಕ್ಕೆ ಗ್ರಾ.ಪಂ ಪಂಚಾಯತಿಯಲ್ಲಿ ವಾಹನ ವ್ಯವಸ್ಥೆ, ವ್ಹೀಲ್ ಚೇರ್ ಸೇರಿದಂತೆ ಅಗತ್ಯ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿತ್ತು. ಬೀಳಗಿ ಎಂಪಿಎಸ್ ಶಾಲೆಯ ಮತ ಕೇಂದ್ರ 76ರಲ್ಲಿ 104 ವರ್ಷದ ಸಿದ್ದವ್ವ ಜಗ್ಗಲ ಮಹಿಳಾ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಹವೇಲಿಯ ಮಸಂ.91 ರಲ್ಲಿ 95 ವರ್ಷದ ಬೋಜಪ್ಪ ದೊಡಮನಿ, ಕಟಗೇರಿ ಗ್ರಾಮದ ಮಸಂ.6ರಲ್ಲಿ 83 ವರ್ಷದ ರುಕ್ಮವ್ವ ಆನೆಗುಂದಿ ಮತ ಚಲಾಯಿಸಿದರು. ಬೇವಿನಮಟ್ಟಿ, ನಾಗರಾಳ, ಆಡಗಲ್ಲ ಸೇರಿದಂತೆ ಇತರೆ ಗ್ರಾಮದ ತೃತೀಯ ಲಿಂಗದ ಮತದಾರರು ಮತ ಚಲಾಯಿಸಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ