ಕೋಲಾರ: ಕಾರ್ಮಿಕರ ನೂರಾರು ಹೋರಾಟಗಳ ಫಲವಾಗಿ ದೇಶದಲ್ಲಿ ಜಾರಿಯಾಗಿರುವ ಹಲವು ಕಾರ್ಮಿಕ ಕಾನೂನುಗಳನ್ನು ಇಂದು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿ, ಕಾರ್ಮಿಕರನ್ನು ಶೋಷಣೆ ಮಾಡಲು ಮುಕ್ತ ಅವಕಾಶವನ್ನು ನೀಡಿದೆ. ಈ ಕುರಿತು ಕಾರ್ಮಿಕರು ಒಗ್ಗಟ್ಟಿನಿಂದ ಸಮರಶೀಲ ಹೋರಾಟವನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಅವ್ರು ಹೇಳಿದ್ರು.
ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರಾಂಗಣದಲ್ಲಿರುವ ಹಲವು ಕೈಗಾರಿಕಾ ಕಾರ್ಮಿಕ ಸಂಘಟನೆಗಳ ಜಂಟಿಯಾಗಿ ಎಕ್ಸಿಡಿ ಕೈಗಾರಿಕೆಯ ಮುಂಭಾಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ಕಾರ್ಮಿಕರನ್ನು ತೀವ್ರ ರೀತಿಯಲ್ಲಿ ಶೋಷಣೆ ಮಾಡುತ್ತಿದ್ದ ಅಮೇರಿಕಾದ ಚಿಕಾಗೋ ನಗರದಲ್ಲಿ 1886ರಲ್ಲಿ ಕೆಲಸದ ಅವಧಿಯನ್ನು 8 ನಿಗದಿ ಮಾಡಬೇಕೆಂದು ನಡೆದ ಹೋರಾಟದ ಸಂದರ್ಭದಲ್ಲಿ 6 ಮಂದಿ ಕಾರ್ಮಿಕರು ಹುತಾತ್ಮರಾದರು ಇವರ ನೆನಪಿಗಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ನಡೆಸಲಾಗುತ್ತಿದೆ ಎಂದು ಸ್ಮರಿಸಿದರು.
ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಜಾರಿಯಾಗಿದ್ದ ಹಲವಾರು ಕಾನೂನುಗಳನ್ನು ಸುಧಾರಣೆಯ ಹೆಸರಿನಲ್ಲಿ ಮಾಲೀಕರಿಗೆ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುತ್ತಿದೆ. ಕಾರ್ಮಿಕರು ಸಂಘ ರಚಿಸುವುದು ಸಂವಿಧಾನಾತ್ಮಕ ಹಕ್ಕಾಗಿದ್ದರೂ, ಸಂಘ ರಚಿಸುವುದು, ದುಡಿಮೆಗೆ ತಕ್ಕ ಪ್ರತಿಫಲ ಕೇಳುವುದು, ಪ್ರತಿಭಟನೆ ನಡೆಸುವುದು ಅಪರಾಧ ಎಂಬ ರೀತಿಯಲ್ಲಿ ಕಾನೂನುಗಳನ್ನು ತಿದ್ದುಪಡಿ ಮಾಡಿ, ಅದನ್ನು ಜಾರಿ ಮಾಡಲು ಈಗಿನ ಕೇಂದ್ರ ಸರ್ಕಾರ ಆವಣಿಸುತ್ತಿದೆ ಎಂದು ಗಾಂಧಿನಗರ ನಾರಾಯಣಸ್ವಾಮಿ ದೂರಿದರು
ಲೋಕಸಭಾ ಚುನಾವಣೆಯ ದೃಷ್ಟಿಕೋನದಲ್ಲಿ ಚುನಾವಣಾ ಬಾಂಡ್ ಮೂಲಕ ಕಾರ್ಪೋರೇಟ್ ಕಂಪನಿಗಳಿಂದ ಸಾವಿರಾರು ಕೋಟಿ ರೂ. ಲಂಚ ಪಡೆದು, ಅವರ ಅನುಕೂಲಕ್ಕೆ ತಕ್ಕಂತೆ ಕಾನೂನುಗಳನ್ನು ಬದಲಾಯಿಸುತ್ತಿದೆ ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳು, ಸರ್ಕಾರಿ ಕಛೇರಿಗಳು, ಕೈಗಾರಿಕೆಗಳಲ್ಲಿ ಖಾಯಂ ಸ್ವರೂಪದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳದೇ ಕೇವಲ ಗುತ್ತಿಗೆ ಕಾರ್ಮಿಕರನ್ನು, ಟ್ರೈನಿಗಳನ್ನು ನೇಮಕ ಮಾಡಿಕೊಂಡು ಅತ್ಯಂತ ಕಡಿಮೆ ವೇತನವನ್ನು ನೀಡಿ, ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಗೆ ತಕ್ಕಂತೆ ವೇತನವನ್ನು ನೀಡುತ್ತಿಲ್ಲ. ಈ ಬಗ್ಗೆ ಎಲ್ಲಾ ಕಾರ್ಮಿಕರು ಒಗ್ಗಟ್ಟಿನಿಂದ ಸಮರಶೀಲ ಹೋರಾಟಗಳನ್ನು ನಡೆಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ಮೇ ದಿನಾಚರಣೆಯ ಪ್ರಮುಖ್ಯತೆಯನ್ನು ವಿವರಿಸಿದರಲ್ಲದೇ ಕಾರ್ಮಿಕರು ಸ್ವಹಿತಾಸಕ್ತಿಗಳಿಗೆ ಬಲಿಯಾದ ಕಾರ್ಮಿಕರ ಹಿತವನ್ನು ಕಾಯುವಂತಾಗಬೇಕು. ಕಾರ್ಮಿಕರ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಗೆಲುವು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ.ಕೃಷ್ಣಪ್ಪ ಮಾತನಾಡಿ ಕಾರ್ಮಿಕರು ತಮ್ಮ ಬೇಡಿಕೆಗಳ ಜೊತೆಗೆ ರಾಜಕೀಯ ಹೋರಾಟವನ್ನು ನಡೆಸಿದರೆ ಮಾತ್ರ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯ ಇದಕ್ಕೆ ಕಾರ್ಮಿಕರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ವಿಧಾನಸೌಧ, ಲೋಕಸಭೆಯಲ್ಲಿ ಇದ್ದರೆ ಕಾರ್ಮಿಕರ ಹೋರಾಟ ನಡೆಸಲು ಕಾನೂನು ರೂಪಿಸಲು ಸಾಧ್ಯ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ವಿವಿಧ ಕೈಗಾರಿಕಾ ಕಾರ್ಮಿಕ ಸಂಘಟನೆಗಳ ಮುಖಂಡ ರಾಜು, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡ ಕುರ್ಕಿ ದೇವರಾಜ್ ಮತ್ತಿತರರು ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಭೀಮರಾಜ್, ಸಿಐಟಿಯು ಮುಖಂಡ ಮೋಹನ್ಬಾಬು, ಡಿವೈಎಫ್ಐ ಮುಖಂಡ ಮುಸ್ತಾಪ, ಎಕ್ಸಿಡಿ ಕಾರ್ಮಿಕರ ಸಂಘದ ಮುಖಂಡರಾದ ವಿ.ಹರೀಶ್, ಪ್ರಮೋದ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಕಾರ್ಮಿಕರು ಕೈಗಾರಿಕಾ ಪ್ರಾಂಗಣದಲ್ಲಿ ಪ್ರಮುಖ ಬೀದಿಗಳಲ್ಲಿ ಬೈಕ್ಗಳಲ್ಲಿ ಮೆರವಣಿಗೆ ನಡೆಸಿದರು.