ಗದಗ:- ಗದಗ ಜಿಲ್ಲೆಯ ನರಗುಂದದ ಬಳಿ ಕುರ್ಲಗೇರಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಜರುಗಿದೆ.
ಆರೋಪಿ ಫೈರೋಜ್ ಕಾಲಿಗೆ ಗುಂಡೇಟು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಗದಗನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಸ್ಥಳ ಮಹಜರು ನಡೆಸಲು ಫೈರೋಜ್ ಮತ್ತವನ ಗ್ಯಾಂಗ್ ಕರೆದುಕೊಂಡು ಪೊಲೀಸರು ಬಂದಿದ್ದರು. ಸ್ಥಳ ಮಹಜರು ನಡೆಸುವ ವೇಳೆ ಪಿಎಸ್ಐ ಶಿವಾನಂದ ಪಾಟೀಲರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಲು ಆರೋಪಿ ಮುಂದಾಗಿದ್ದಾನೆ. ಹಲ್ಲೆ ಮಾಡಿದ ಫೈರೋಜ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.
ಏಕಾಏಕಿ ನಡೆದ ದಾಳಿಯಿಂದ ಘಟನೆಯಲ್ಲಿ ಪಿಎಸ್ ಐ ಶಿವಾನಂದ ಪಾಟೀಲರಿಗೆ ತಲೆಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಪೊಲೀಸರಿಂದ ಗುಂಡೇಟು ತಿಂದು ಗಾಯಗೊಂಡಿರೋ ಆರೋಪಿ ಫೈರೋಜ್ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ