ಬಳ್ಳಾರಿ: ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಗೆ ಬಳ್ಳಾರಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಿದ್ದಕ್ಕೆ ಬಿಜೆಪಿ ಆಕ್ರೋಶ, ಪ್ರತಿಭಟಿಸಿದ ಹಿನ್ನೆಲೆ ಬಳ್ಳಾರಿಯಲ್ಲಿ ಸಚಿವ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಅಂತಾ ಹೇಳೆ ಇಲ್ಲ, ನೂರಕ್ಕೆ ನೂರು ಪರ್ಸೆಂಟ್ ಪಾಕಿಸ್ತಾನ್ ಜಿಂದಾಬಾದ್ ಅಂದಿಲ್ಲ, ಯಾರು ಪಾಕಿಸ್ತಾನ್ ಜಿಂದಾಬಾದ್ ಅಂದಿಲ್ಲ, ಅದನ್ನ ಕೆಲವರು ಎಡಿಟ್ ಮಾಡಿ ಮ್ಯಾನುಪ್ಲೇಟ್ ಮಾಡಿದ್ದಾರೆ, ಎಫ್ ಎಸ್ ಎಲ್ ವರದಿ ಇನ್ನೂ ಬಂದೇ ಇಲ್ಲ ಎಂದು ಮಾಧ್ಯಮದವರ ಜೊತೆ ಸಚಿವ ನಾಗೇಂದ್ರ ವಾದ ಮಾಡಿದರು.
ವರದಿ ಬಂದಿಲ್ಲವಾದರೇ ಆರೋಪಿಗಳನ್ನ ಬಂಧಿಸಿದ್ದು ಯಾಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸಾಮಾನ್ಯವಾಗಿ ಅಂತಹ ಪ್ರಕರಣವಾದಾಗ ನಡೆದಾಗ ಬಂಧನ ಮಾಡುವುದು ಒಂದು ಅಭ್ಯಾಸ, ಮುಗ್ದರನ್ನ ತೆಗೆದುಕೊಂಡು ಹೋಗಿ ಒಳಗೆ ಹಾಕಿ, ಆ ಮೇಲೆ ಬೇಲ್ ಕೊಡಲಾಗಿದೆ, ನಮ್ಮ ಭಾರತದಲ್ಲಿ ಯಾವನಾದ್ರು ಪಾಕಿಸ್ತಾನ್ ಜಿಂದಾಬಾದ್ ಅಂದಿದ್ದರೇ, ಅಂತವರನ್ನು ಗಲ್ಲಿಗೇರಿಸಿದರು ತಪ್ಪಿಲ್ಲ, ಆದ್ರೆ ನೂರಕ್ಕೆ ನೂರು ಪರ್ಸೆಂಟ್ ಪಾಕಿಸ್ತಾನ್ ಜಿಂದಾಬಾದ್ ಅಂದಿಲ್ಲ, ಎಫ್ ಎಸ್ ಎಲ್ ವರದಿಯಲ್ಲಿ ಸತ್ಯ ಬರತ್ತೆ, ನಮ್ಮ ಕರ್ನಾಟಕದಲ್ಲಿ ಯಾರು ಹಂಗೆ ಮಾಡಲ್ಲ, ಮಾಡಿದ್ರೆ ಅವನನ್ನ ಗಲ್ಲಿಗೇರಿಸಿದ್ರು ತಪ್ಪಿಲ್ಲ ಎಂದು ಹೇಳಿದರು.
ಇನ್ನೂ ರಾಹುಲ್ ಗಾಂಧಿ ಭಾಷಣದಲ್ಲಿ ನಮ್ಮ ಮುಖ್ಯ ಮಂತ್ರಿ, ಡಿ.ಕೆ ಶಿವಕುಮಾರ್ ಎಂದ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ನಮ್ಮ ಅಧಿನಾಯಕರು ಯಾವ ಕಾರಣಕ್ಕೆ ಹಾಗಂದಿದ್ದಾರೋ ಗೊತ್ತಿಲ್ಲ. ಡಿ ಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಅಂತಾ ಬಹಳ ಜನಕ್ಕೆ ಬಯಕೆ ಇದೆ, ಅದ್ರಲ್ಲಿ ಏನ್ ತಪ್ಪಿಲ್ಲ, ಮಂತ್ರಿಯಾದವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇರೋದು ಸಾಮಾನ್ಯ, ರಾಹುಲ್ ಗಾಂಧಿ ಅವರು ಬಾಯಿ ತಪ್ಪಿನಿಂದ ಹೇಳಿರಬಹುದು ಎಂದು ಹೇಳಿದರು.