ಮಹದೇವಪುರ: ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಎಂದು ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ವಿ.ವರುಣ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಪಂಚಾಯತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ, ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿಯ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಹೀಗೆ ಅವರಿಗೆ ತಿಳಿಯದ ಕ್ಷೇತ್ರವಿರಲಿಲ್ಲ ಎಂದು ನುಡಿದರು.
ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಎಲ್ಲರ ಜೊತೆಗೆ ಕರೆದೊಯ್ಯುವ ಉದ್ದೇಶ ಅವರದಾಗಿತ್ತು ಎಂದರು.
ಭಗವಾನ್ ಮಹಾವೀರರು ಹಿಂಸಾ ಮಾರ್ಗವನ್ನು ತೊರೆದು ಅಹಿಂಸಾ ಮಾರ್ಗದಲ್ಲಿ ನಡೆಯುವಂತೆ ಜನರಿಗೆ ತಿಳಿಹೇಳುತ್ತಿದ್ದರು. ಡಾ. ಅಂಬೇಡ್ಕರ್ ಕೂಡ ಇದೇ ಹಾದಿಯಲ್ಲಿ ನಡೆದಿದ್ದರು. ಬದುಕಬೇಕು ಮತ್ತು ಎಲ್ಲರನ್ನೂ ಬದುಕಲು ಬಿಡಬೇಕು ಎಂಬುದೇ ಈ ಇಬ್ಬರೂ ಮಹಾತ್ಮರ ಧ್ಯೇಯವಾಗಿತ್ತು. ಇದನ್ನು ನಾವೆಲ್ಲರೂ ತಮ್ಮ ಜೀವನದಲ್ಲಿ ಅಳವಡಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಬಿದರಹಳ್ಳಿ ಪಂಚಾಯತಿ ಅಧ್ಯಕ್ಷೆ ಕವಿತಾ,ಪಂಚಾಯತಿ ಸದಸ್ಯರಾದ ಮುನಿಯಪ್ಪ,ಕೆ.ಕುಮಾರ್,ಪಿಡಿಓ ರೋಹಿತ್,ಕಾರ್ಯದರ್ಶಿ ಮುನಿರಾಜು
ಇದ್ದರು.