ದೊಡ್ಡಬಳ್ಳಾಪುರ: ನೇಯ್ಗೆ ಉದ್ಯಮಕ್ಕೆ ಹೆಸರಾದ, ಒಕ್ಕಲಿಗರ ಪ್ರಾಬಲ್ಯವಿರುವ ದೊಡ್ಡಬಳ್ಳಾಪುರದಲ್ಲಿ ಮತಬೇಟೆಗೆ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ(ಏ.15) ಆಗಮಿಸಲಿದ್ದಾರೆ.
ಮಂಡ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಅವ್ಯವಸ್ಥೆ ; ಕಾರ್ಯಕ್ರಮ ಬಹಿಷ್ಕರಿಸಿದ ದಲಿತ ಮುಖಂಡರು
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಮಧ್ಯಾಹ್ನ 1.30ಕ್ಕೆ ಆಗಮಿಸುವರು. ಇಲ್ಲಿನ ಪ್ರಸಿದ್ಧ ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಇದೇ ವೃತ್ತದಲ್ಲಿ ಮೈತ್ರಿ ಅಭ್ಯರ್ಥಿ ಪರ ಬಹಿರಂಗ ಸಭೆಯಲ್ಲಿ ಮತಯಾಚನೆ ಮಾಡಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಅವರು ತಿಳಿಸಿದರು.
ಈಗಾಗಲೇ ಡಾ.ಕೆ.ಸುಧಾಕರ್ ಪರವಾಗಿ ತಾಲ್ಲೂಕಿನ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಚುರುಕಿನ ಪ್ರಚಾರ ಪ್ರಚಾರ ನಡೆಸಲಾಗಿದೆ. ಎಲ್ಲೆಡೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಮನೆ ಮನೆ ಪ್ರಚಾರ, ಗ್ರಾ.ಪಂ ಹಾಗೂ ಹೋಬಳಿ ಮಟ್ಟದಲ್ಲಿ ಹಗಲಿರುಳು ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಈ ಬಾರಿ ಡಾ.ಕೆ.ಸುಧಾಕರ್ ಅವರನ್ನು ಗೆಲ್ಲಿಸಿಕೊಂಡು ನರೇಂದ್ರಮೋದಿ ಅವರನ್ನು ಮತ್ತೊಂದು ಅವಧಿಗೆ ಪ್ರಧಾನಿಯನ್ನಾಗಿ ಕಾಣುವ ಅಚಲ ಉದ್ದೇಶದೊಂದಿಗೆ ಎಲ್ಲರೂ ಶ್ರಮ ವಹಿಸುತ್ತಿದ್ದೇವೆ. ಪ್ರಚಾರದ ವೇಳೆ ಜೆಡಿಎಸ್ ಪಕ್ಷದ ಸಾಧನೆ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರೈತರು, ಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದವರಿಗಾಗಿ ಮಾಡಿದ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಮತ ಕೇಳುತ್ತಿದ್ದೇವೆ ಎಂದು ಹರೀಶ್ ಗೌಡ ಅವರು ತಿಳಿಸಿದರು.
ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಕರೆತರಬೇಕು ಎಂದು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹರೀಶ್ ಗೌಡ ಅವರು ಮನವಿ ಮಾಡಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರು ರೋಡ್ ಶೋ ನಡೆಸುವ ನಿರೀಕ್ಷೆ ಇದೆ.