ಬೆಂಗಳೂರು: ಕಾರಿನ ಡೋರ್ ಓಪನ್ ಮಾಡುವಾಗ ನಮ್ಮ ಕಾರ್ಯಕರ್ತ ಹಿಂದಿನಿಂದ ಬಂದು ಗುದ್ದಿದ್ದಾನೆ. ಈ ವೇಳೆ ಬೈಕ್ನಿಂದ ಬಿದ್ದಾಗ ಅವನ ಮೇಲೆ ಬಸ್ ಹರಿದಿದೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ಪ್ರತಿಕ್ರಿಯಿಸಿದರು. ಘಟನೆ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇವತ್ತು ನಮ್ಮ ಪಕ್ಷದ ರ್ಯಾಲಿ ಇತ್ತು. ಎಲ್ಲರೂ ರ್ಯಾಲಿ ಮುಗಿಸಿಕೊಂಡು ಬರುವಾಗ ಕೆಆರ್ ಪುರಂ ಸರ್ಕಲ್ (KR Puram Circle) ಬಳಿ ಕಾರು ನಿಲ್ಲಿಸಿದ್ವಿ. ನಮ್ಮ ಕಾರ್ಯಕರ್ತ ಹಿಂಬದಿಯಿಂದ ಬಂದು ಗುದ್ದಿಕೊಂಡಿದ್ದಾನೆ.
ಕಾರ್ ನಮ್ಮದೇ, ಡೋರ್ ತೆಗೆದಾಗ ಬಿದ್ದಿದ್ದಾರೆ. ನಂತರ ಅವರ ಮೇಲೆ ಬಸ್ ಹರಿದಿದೆ. ಪೋಸ್ಟ್ ಮಾರ್ಟಮ್ ವರದಿ ಬಂದ ನಂತರ ಎಲ್ಲವೂ ತಿಳಿಯುತ್ತೆ ಎಂದು ಶೋಭಾ ಹೇಳಿದರು. ಪ್ರಕಾಶ್ ಸಾವು ಸಂಭವಿಸಿರೋದು ನಿಜಕ್ಕೂ ದುರ್ದೈವ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ನಾವು ಅವರ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತೀವಿ. ಅವರ ಕುಟುಂಬದ ಜೊತೆಗೆ ನಾವೀದ್ದೇವೆ. ಅಲ್ಲದೇ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ನಮ್ಮ ಪಕ್ಷ ನಿರ್ಧರಿಸುತ್ತೆ ಎಂದು ಹೇಳಿದರು.