ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಶುಕ್ರವಾರ (ಇಂದು) ಸೋಮನಾಥ ದೇವಸ್ಥಾನಕ್ಕೆ (Somnath Temple) ಭೇಟಿ ನೀಡಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿ, ಕೈಮುಗಿದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಭಕ್ತಿಯಿಂದ ಶಿವನ ಶ್ಲೋಕ ಪಠಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಈ ವಿಶಿಷ್ಟ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮುಂಬೈ (Mumbai Indians) ತಂಡದ ಅಭಿಮಾನಿಗಳು ಪಾಂಡ್ಯರನ್ನ ಟ್ರೋಲಿಗೆಳೆದಿದ್ದಾರೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಗುಜರಾತ್ ಟೈಟಾನ್ಸ್ ಎದುರು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ನಂತರ ಸನ್ರೈಸರ್ಸ್ ಹೈದರಾಬಾದ್ (SRH) ಹಾಗೂ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧವೂ ಸೋಲು ಅನುಭವಿಸಿತ್ತು. ಆರಂಭಿಕ ಮೂರು ಪಂದಗಳಲ್ಲೂ ಸೋತ ಕಾರಣ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯದೇ ಕೊನೇ ಸ್ಥಾನಕ್ಕೆ ಕುಸಿದಿದೆ.
ಇದರಿಂದಾಗಿ ಪಾಂಡ್ಯ ಅವರನ್ನ ಟ್ರೋಲಿಗೆಳೆದಿರುವ ಕ್ರಿಕೆಟ್ ಅಭಿಮಾನಿಗಳು, ಇನ್ನಾದರೂ ಮುಂಬೈ ತಂಡ ಗೆಲ್ಲಲಿ, ನನ್ನನ್ನ ಸಕ್ಸಸ್ಫುಲ್ ಕ್ಯಾಪ್ಟನ್ ಅಂತಾ ಒಪ್ಪಿಕೊಳ್ಳಲಿ ಎಂದು ಪಾಂಡ್ಯ ಪ್ರಾರ್ಥನೆ ಮಾಡಿರಬೇಕು. ಪಾಪ ಗೆಲ್ಲಿಸಿಬಿಡಪ್ಪ ದೇವರೆ ಅಂತಾ ಕಿಚಾಯಿಸಿದ್ದಾರೆ.
ಇನ್ನೂ ಪಾಂಡ್ಯ ನಾಯಕತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ಮೂರು ಪಂದ್ಯಗಳಲ್ಲೂ ಸೋತಿರುವುದು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವವನ್ನು ಇನ್ನಷ್ಟು ಹದಗೆಡಿಸಿದೆ. ಅವರ ವೃತ್ತಿಜೀವನದಲ್ಲೂ ಇದು ಕಠಿಣ ಹಂತ. ಪಾಂಡ್ಯ ಅವರು ಈಗ ಆಡುತ್ತಿರೋದು ಭಾರತ ಕ್ರಿಕೆಟ್ ತಂಡವಲ್ಲ. ಇದು ಫ್ರಾಂಚೈಸಿ ಕ್ರಿಕೆಟ್. ಅಧಿಕ ಹಣ ಪಾವತಿಸಿರುತ್ತಾರೆ. ಫ್ರಾಂಚೈಸಿಯ ಮುಖ್ಯಸ್ಥರು ಯಾರನ್ನ ನಾಯಕರನ್ನಾಗಿ ಮಾಡಲು ಬಯಸುತ್ತಾರೋ, ಅವರೇ ನಾಯಕರಾಗುತ್ತಾರೆ. ಪಾಂಡ್ಯ ಉತ್ತಮವಾಗಿ ತಂಡವನ್ನು ನಿರ್ವಹಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.