ರಾಜಸ್ಥಾನದ ತವರು ಮೈದಾನವಾದ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಅದ್ಭುತ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಇಂದು ಎದುರಿಸಲಿದೆ.
ಈ ಪಂದ್ಯ ಉಭಯ ತಂಡಗಳಿಗೂ ಬಹಳ ಮುಖ್ಯವಾಗಿದೆ. ಏಕೆಂದರೆ ಒಂದೆಡೆ ಆರ್ಸಿಬಿ ಸತತ ಸೋಲುಗಳಿಂದ ಹೊರಬರಲು ಎದುರು ನೋಡುತ್ತಿದ್ದರೆ, ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ತನ್ನ ಗೆಲುವಿನ ಲಯವನ್ನು ಮುಂದುವರೆಸಲು ಪ್ರಯತ್ನಿಸಲಿದೆ.
ಸತತ ಮೂರು ಸೋಲುಗಳನ್ನು ಕಂಡಿರುವ ಆರ್ಸಿಬಿ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ರಾಯಲ್ಸ್ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ರಾಯಲ್ಸ್ ಗೆದ್ದರೆ ಅದು ಮೊದಲ ಸ್ಥಾನಕ್ಕೇರುವ ಅವಕಾಶ ಪಡೆಯಲ್ಲಿದೆ. ಇತ್ತ ಆರ್ಸಿಬಿ ಕೂಡ ಮೇಲಕ್ಕೇರುವ ಅವಕಾಶ ಹೊಂದಿದೆ.
ಇನ್ನು ಆರ್ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಬಗ್ಗೆ ಹೇಳುವುದಾದರೆ.. ಕಳೆದ ನಾಲ್ಕು ಪಂದ್ಯಗಳಲ್ಲ್ಲೂ ತಂಡದ ಅಗ್ರ ಕ್ರಮಾಂಕವು ಉತ್ತಮ ಪ್ರದರ್ಶನ ನೀಡಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಮತ್ತು ರಜತ್ ಪಾಟಿದಾರ್ ನಿರೀಕ್ಷತ ಪ್ರದರ್ಶನ ನೀಡದಿರುವುದೇ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.
ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಎರಡು ಅರ್ಧ ಶತಕ ಸೇರಿದಂತೆ 203 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಆದರೆ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಆರ್ಸಿಬಿ ಪರ ಖಚಿತವಾಗಿ ಒಂದು ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.
ಅದರಂತೆ 17.5 ಕೋಟಿ ಪಡೆದು ಆರ್ಸಿಬಿ ಸೇರಿಕೊಂಡಿದ್ದ ಆಸೀಸ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಎರಡು ವಿಭಾಗಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರ ಬದಲಿಗೆ ಸ್ಫೋಟಕ ಬ್ಯಾಟ್ಸ್ಮನ್ ವಿಲ್ ಜಾಕ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಬಹುದಾಗಿದೆ.