ಬೆಂಗಳೂರು:- ಬಿಸಿಲ ಝಳಕ್ಕೆ ರಾಜ್ಯದ ಜನತೆ, ಕೂಲಿ ಕಾರ್ಮಿಕರು ಹೈರಾಣಾಗಿದ್ದಾರೆ.
ಪ್ರಸ್ತುತ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2 ರಿಂದ 3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ಎಪ್ರಿಲ್ ತಿಂಗಳಿನಿಂದ ಮೇ ತಿಂಗಳ ಅವಧಿಯಲ್ಲಿ ಬರುವ ಬಿಸಿ ವಾತಾವರಣವು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾಗಿ ಇರುತ್ತದೆ ಎಂದು ಭಾರತ ಹವಾಮಾನ ಇಲಾಖೆಯು ಸೂಚಿಸಿದೆ.
ಬೆಂಗಳೂರು ನಗರದಲ್ಲಿ ಮೂರು ದಿನಗಳಿಂದ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದ್ದು, ಬಿಸಿಲು ನಗರದ ಜನರನ್ನು ಕಂಗೆಡಿಸಿದೆ. ಮಳೆಯ ಛಾಯೆಯೂ ಇಲ್ಲದೆ, ತಾಪಮಾನದಲ್ಲೂ ಏರಿಕೆಯಾಗಿ ಮನೆಯಿಂದ ಹೊರ ಬರಲು ಆತಂಕಪಡುವ ಸ್ಥಿತಿ ಇದೆ. ಕಳೆದ ಐದು ವರ್ಷಗಳಲ್ಲೇ ಈ ವರ್ಷ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವಾರ ನಗರದಲ್ಲ್ಲಿ 34 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬುಧವಾರ(ಎ.3) ನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಗುರುವಾರ(ಎ.4) 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಐದು ವರ್ಷದಲ್ಲಿ ಇದೇ ಮೊದಲ ಬಾರಿ ಇಷ್ಟು ಹೆಚ್ಚಿನ ಪ್ರಯಾಣದ ಉಷ್ಣಾಂಶ ದಾಖಲಾಗಿದ್ದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಾಪಮಾನದ ಮುನ್ಸೂಚನೆಯ ಹೆಚ್ಚಳವು ರಾಜ್ಯಾದ್ಯಂತ ಸಾಮಾನ್ಯ ಶಾಖದ ಅಲೆಗಳು 2 ರಿಂದ 14 ದಿನಗಳು ಮೀರುವ ಸಾಧ್ಯತೆಯಿದೆ. ಇದು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅತೀ ಹೆಚ್ಚು ತಾಪಮಾನ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಕಂದಾಯ ಇಲಾಖೆಯು ಸಲಹೆ, ಸೂಚನೆಗಳನ್ನು ನೀಡಿದೆ.
ಅಲ್ಲದೆ, ಈಗಾಗಲೇ ರಾಜ್ಯದಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿರುವುದರಿಂದ, ಅತೀ ಹೆಚ್ಚು ತಾಪಮಾನದ(ಬಿಸಿ ಗಾಳಿ) ಪ್ರತಿಕೂಲ ಪರಿಣಾಮವನ್ನು ತಡೆಗಟ್ಟಲು ಮತ್ತು ತಗ್ಗಿಸಲು ಸಲಹೆಗಳನ್ನು ನೀಡುವುದು ಅವಶ್ಯವಿರುತ್ತದೆ ಎಂದು ಕಂದಾಯ ಇಲಾಖೆ ತಿಳಿಸಿದೆ.