ಧಾರವಾಡ: ಲೋಕಸಭಾ ಚುನಾವಣೆಗೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ ಎಂಬ ವಿಚಾರವಾಗಿ ಧಾರವಾಡದ ಸೇವಾಲಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಭಕ್ತರ ಸಭೆ ಕರೆದಿದ್ದರು. ಸ್ವಾಮೀಜಿಗಳು ಸೇವಾಲಯಕ್ಕೆ ಬರುತ್ತಿದ್ದಂತೆ ಭಕ್ತಗಣ ಹೂವಿನ ಹಾಸಿಗೆ ಮೇಲೆ ಅವರನ್ನು ಬರಮಾಡಿಕೊಂಡರು. ನಾನು ಒಂದು ಗುರಿ ಇಟ್ಟುಕೊಂಡಿದ್ದು, ಆ ಗುರಿ ಮುಟ್ಟುವ ತನಕ ಕೊರಳಲ್ಲಿ ಮಾಲೆ ಹಾಕಿಕೊಳ್ಳುವುದಿಲ್ಲ ಎಂದು ಭಕ್ತರಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಕ್ತರೊಂದಿಗೆ ಮಾತುಕತೆ ನಡೆಸಿದ ದಿಂಗಾಲೇಶ್ವರ ಸ್ವಾಮೀಜಿ, ಭಕ್ತರ ಅಭಿಪ್ರಾಯ ಸಂಗ್ರಹಿಸಿದರು. ಸಭೆಯಲ್ಲಿ ಎಲ್ಲ ಭಕ್ತರು, ದಿಂಗಾಲೇಶ್ವರ ಸ್ವಾಮೀಜಿಗಳು ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕು ಎಂಬ ನಿರ್ಣಯ ಮಂಡಿಸಿದರು. ಅಲ್ಲದೇ ಚುನಾವಣೆ ಸಂಬಂಧ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರ ಹಿತರಕ್ಷಣಾ ಸಮಿತಿ ರಚನೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಂಡರು.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ತಿಂಗಳಿಗೆ 12,400 ರೂ. ಸ್ಕಾಲರ್ ಶಿಪ್..! ಇಂದೇ ಅರ್ಜಿ ಸಲ್ಲಿಸಿ
ಅಂತಿಮವಾಗಿ ಭಕ್ತರ ಅಭಿಪ್ರಾಯ ಮತ್ತು ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ, ನಾನು ಯಾವುದೇ ಒತ್ತಡ ಮತ್ತು ಆಮಿಷಕ್ಕೆ ಒಳಗಾಗುವುದಿಲ್ಲ. ಭಕ್ತರ ಸಭೆಯಲ್ಲಿ ಎಲ್ಲರೂ ನಾನು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ಇಲ್ಲಿಯೂ ಬದಲಾವಣೆ ಆಗಬೇಕು ಎಂದಿದ್ದಾರೆ. ಈ ವಿಚಾರ ರಾಷ್ಟ್ರಮಟ್ಟಕ್ಕೆ ತಲುಪಿದೆ. ನನ್ನ ಹಿಂದೆ ಇನ್ನೂ ಅನೇಕ ಪ್ರಮುಖರಿದ್ದಾರೆ. ಅವರ ಅಭಿಪ್ರಾಯ ತಿಳಿದುಕೊಳ್ಳುತ್ತೇನೆ. ನಮ್ಮ ಗುರುಗಳ ಹಾಗೂ ಇನ್ನಷ್ಟು ಭಕ್ತರ ಅಭಿಪ್ರಾಯ ಪಡೆದು ಶೀಘ್ರವೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಕಳೆದ 8-10 ದಿನಗಳಿಂದ ತೀವ್ರ ಚರ್ಚೆ ಹುಟ್ಟು ಹಾಕಿರುವ ದಿಂಗಾಲೇಶ್ವರ ಸ್ವಾಮೀಜಿ ಇದೀಗ ಧಾರವಾಡದಲ್ಲೂ ಭಕ್ತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಒತ್ತಾಯ ಭಕ್ತರದ್ದಾದರೆ ಅವರು ಮಾತ್ರ ತಮ್ಮ ನಿರ್ಧಾರ ಪ್ರಕಟಿಸಲು ಇನ್ನಷ್ಟು ಸಮಯಾವಕಾಶ ಪಡೆದುಕೊಂಡಿದ್ದಾರೆ.