ಅಮರಾವತಿ: ಕರ್ನಾಟಕ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಗ್ಯಾರಂಟಿಗಳ ಮೂಲಕ ಮತದಾರರನ್ನು ಸೆಳೆಯಲು ಯಶಸ್ವಿಯಾಗಿರುವ ಕಾಂಗ್ರೆಸ್, ಸದ್ಯ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿಯೂ ಅದೇ ತಂತ್ರ ಪ್ರಯೋಗಿಸುತ್ತಿದೆ. ಮೇ 13ರಂದು ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ರೂ., ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಸೇರಿದಂತೆ 9 ಗ್ಯಾರಂಟಿಗಳನ್ನು ಘೋಷಿಸಿದೆ.
ಆಂಧ್ರ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈಎಸ್ ಶರ್ಮಿಳಾ, ”ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶಕ್ಕೆ 10 ವರ್ಷ ವಿಶೇಷ ಸ್ಥಾನಮಾನ ನೀಡುವುದು ಪಕ್ಷದ ಪ್ರಥಮ ಗ್ಯಾರಂಟಿಯಾಗಿದೆ,” ಎಂದರು. ಮಹಿಳಾ ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ 8,500 ರೂ.ನಂತೆ ವಾರ್ಷಿಕ 1 ಲಕ್ಷ ರೂ. ನೀಡಲಾಗುವುದು.
Ration Card: ಇಂದಿನಿಂದ ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ..! ಇಂತವರಿಗೆ ಮಾತ್ರ ಅವಕಾಶ
ಇದು ಪಕ್ಷದ ಎರಡನೆಯ ಗ್ಯಾರಂಟಿಯಾಗಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಜತೆಗೆ ಶೇ. 50ರಷ್ಟು ಹೆಚ್ಚುವರಿ ಹಣ, ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕನಿಷ್ಠ ಕೂಲಿ 400 ರೂ.ಗೆ ಏರಿಕೆ, ಕೆ.ಜಿ.ಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣದ ಭರವಸೆಗಳನ್ನು ಘೋಷಣೆ ಮಾಡಿದೆ. ಪ್ರತಿ ವಸತಿ ರಹಿತ ಕುಟುಂಬಕ್ಕೆ 5 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ, ಫಲಾನುಭವಿಗಳಿಗೆ ಮಾಸಿಕ 4 ಸಾವಿರ ರೂ. ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಅಂಗವಿಕಲರಿಗೆ 6,000 ರೂ. ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಭರವಸೆ ನೀಡಿದೆ.