ವಿಜಯನಗರ: 30 ರೂಪಾಯಿಗೆ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಕೊಡುತ್ತೇವೆ ಅಂದ್ರು.. ಕೊಟ್ರಾ..? 300 ರೂಪಾಯಿಗೆ ಸಿಲೆಂಡರ್ ಕೊಡ್ತಿವಿ ಅಂದ್ರು ಕೊಟ್ರಾ? ಎಲ್ಲಿದೆ ಅಚ್ಛೇ ದಿನ್ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಜನರ ಮನೆಗಳನ್ನ ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ. ಮೋದಿ ಅವರು ಪ್ರಜೆಗಳ ಯೋಗಕ್ಷೇಮ ಸುಭಿಕ್ಷೆಯಾಗುವ ರೀತಿ ಆಡಳಿತ ಮಾಡಿಲ್ಲ. ದಶಕಗಳಿಂದ ದೇಶದ ಜನರಿಗೆ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಪೋಣಿಸುತ್ತಾ ಬಂದಿದ್ದಾರೆ ಎಂದರು. 15 ಲಕ್ಷ ಕ್ಯಾಶ್ ಕೊಡಲಿಲ್ಲ, ಉದ್ಯೋಗ ಸೃಷ್ಟಿಸಲಿಲ್ಲ, ಬಡತನ ನಿರ್ಮೂಲನೆ ಮಾಡಲಿಲ್ಲ.
ಬದಲಿಗೆ ಬರೀ ಭಾವನಾತ್ಮಕ ಬೊಗಳೆ ಬಿಡುತ್ತಲೇ ಜನರ ದಿಕ್ಕನ್ನು ತಪ್ಪಿಸಿದ್ದಾರೆ ಎಂದರು. ಸಾಮಾಜಿಕ ನ್ಯಾಯದ ಮೂಲಕ ನನ್ನಂತ ಕಡುಬಡವನಿಗೆ ಮೀಸಲಾತಿ ಕಾಂಗ್ರೆಸ್ ಕೊಟ್ಟಿದೆ. ಇದರಿಂದ ನಾಲ್ಕು ಬಾರಿ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಸಂಸದ ಆಗಲಿ ಅಂತ ವರಿಷ್ಠರು ಲೋಕಸಭಾ ಟಿಕೆಟ್ ಕೊಟ್ಟಿದ್ದಾರೆ. ಜೋಡೆತ್ತುಗಳಂತೆ ಕೂಡ್ಲಿಗಿ ಕ್ಷೇತ್ರಕ್ಕೆ ತುಕಾರಾಂ, ಶ್ರೀನಿವಾಸ್ ಕೆಲಸ ಮಾಡುತ್ತೇವೆ ಎಂದರು.