ಬೆಂಗಳೂರು: ಕೋಲಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿಪಕ್ಷದ ಟಿಕೆಟ್ಗಾಗಿ ರಂಪಾಟ ನಡೆಸಿದ್ದ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ಎರಡೂ ಬಣಗಳನ್ನು ಬದಿಗೆ ಸರಿಸಿದ ಎಐಸಿಸಿ ಹೈಕಮಾಂಡ್, ಹೊಸ ಮುಖ ಕೆ.ವಿ.ಗೌತಮ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಜಿಲ್ಲೆಯ ನಾಯಕರ ನಡುವಿನ ಕಾಲೆಳೆದಾಟದಲ್ಲಿ ಎರಡೂ ಗುಂಪಿಗೆ ಸಂಬಂಧವಿಲ್ಲದ ಯುವ ಮತ್ತು ಉತ್ಸಾಹಿ ಗೌತಮ್ಗೆ ಟಿಕೆಟ್ ಅದೃಷ್ಟ ಒಲಿದಿದೆ.
ಯಾರು ಗೌತಮ್?
49ರ ಹರೆಯದ ಗೌತಮ್ ಕಳೆದ 20 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಡಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಗೌತಮ್ ತಂದೆ ವಿಜಯಕುಮಾರ್ ಕೂಡ ಕಾಂಗ್ರೆಸ್ ನಾಯಕರಾಗಿದ್ದರು. ಸಚಿವ ದಿನೇಶ್ ಗುಂಡೂರಾವ್ ಅವರ ಅವಧಿಯಲ್ಲೂ ಯೂತ್ ಕಾಂಗ್ರೆಸ್ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಗೌತಮ್ ಕೆಲಸ ಮಾಡಿದ್ದಾರೆ.
ಡಾ.ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಕೆಪಿಸಿಸಿ ಪದಾಧಿಕಾರಿಯಾಗಿದ್ದರು. ಈಗ ಕಾಂಗ್ರೆಸ್ ಡಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 49 ವರ್ಷದ ಗೌತಮ್ ಅವರು ದಲಿತ ಎಡ ಸಮುದಾಯಕ್ಕೆ ಸೇರಿದವರಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ನ್ಯಾಯದ ಲೆಕ್ಕಾಚಾರ
ಬಿಜೆಪಿ ಪರಿಶಿಷ್ಟ ಎಡಗೈ ಸಮುದಾಯದ ಇಬ್ಬರಿಗೆ ಟಿಕೆಟ್ ಕೊಟ್ಟಿದ್ದು, ಚಿತ್ರದುರ್ಗದ ಚಂದ್ರಪ್ಪ ಅವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇದರಿಂದ ಹೆಚ್ಚಿನ ಜನಸಂಖ್ಯೆ ಇರುವ ಪರಿಶಿಷ್ಟ ಎಡಗೈಗೆ ತಪ್ಪು ಸಂದೇಶ ರವಾನೆ ಆಗಬಾರದು ಎಂಬ ಲೆಕ್ಕಾಚಾರದಿಂದ ಕೋಲಾರದಲ್ಲಿಗೌತಮ್ಗೆ ಅವಕಾಶ ನೀಡಲಾಗಿದೆ. ಸುನಿಲ್ ಬೋಸ್, ರಾಧಾಕೃಷ್ಣ ದೊಡ್ಡಮನಿ ಮತ್ತು ರಾಜು ಅಲಗೂರು ಬಲಗೈ ಸಮುದಾಯದವರಾಗಿದ್ದರು.