ಕಾರವಾರ:- ಬಿಜೆಪಿ ನಾಯಕರ ವಿರುದ್ಧ ಶಿವರಾಮ್ ಹೆಬ್ಬಾರ್ ಸಿಡಿಮಿಡಿಗೊಂಡಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಅವರು, ನನಗೆ ಸಮಾಧಾನವಾಗಿಲ್ಲ ಅಂದರೆ ಅವರು ಅಭ್ಯರ್ಥಿ ಬದಲಿಸ್ತಾರಾ ಎಂದು ಪ್ರಶ್ನಿಸಿದ್ದಾರೆ. ಯಾರ ಪರ ಕೆಲಸ ಮಾಡಬೇಕೆಂದು ನಿರ್ಣಯಮಾಡಿ ಹೇಳುತ್ತೇನೆ. ಯಾರ ಸಮಾಧಾನ ಅಥವಾ ಅಸಮಾಧಾನವನ್ನು ಬಿಜೆಪಿ ಹೈಕಮಾಂಡ್ ಕೇಳುವುದಿಲ್ಲ. ಅವರ ಸಮಾಧಾನ ಹೇಗಿದೆಯೋ ಹಾಗೆ ನಿರ್ಣಯ ಮಾಡುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ರಾಜ್ಯಸಭೆ ಚುನಾವಣೆಗೆ ಗೈರಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವಂತೆ ಮಾಡಿದ್ದ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೆಬ್ಬಾರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದರೂ ಶಿರಸಿ ಕೈ ಮುಖಂಡರು ಮತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸಭೆ ನಡೆಯುತ್ತಿದ್ದ ವೇಳೆ ಕೆಲವರು ಹೆಬ್ಬಾರ್ಗೆ ಸ್ವಾಗತ ಎಂದರೆ, ಹೆಚ್ಚಿನವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೆಬ್ಬಾರ್ ಬೆಂಬಲಿಗರು ಮತ್ತು ಕೈ ಕಾರ್ಯಕರ್ತರ ನಡುವೆ ಗಲಾಟೆಯೇ ನಡೆದಿದೆ.
ಕಾಂಗ್ರೆಸ್ ಸೇರ್ಪಡೆಗೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವರಾಮ್ ಹೆಬ್ಬಾರ್, ನಾನು ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತೇನೆ ಎಂದು ಅವರಿಗೆ ಅರ್ಜಿ ಕೊಡಲು ಹೋಗಿಲ್ಲ. ನಾನು ಸೇರ್ಪಡೆ ಆಗುತ್ತೇನೆ ಅಥವಾ ಇಲ್ಲವೋ ಎಂಬುದನ್ನು ಹೇಳುತ್ತೇನೆ. ಬೆಂಬಲಿಗರಿಂದ ಕಾಂಗ್ರೆಸ್ ಸೇರುವ ನಿರ್ಣಯ ಅರ್ಜೆಂಟ್ ಆಗಬಹುದು. ಅಂತರವನ್ನು ಕಾಯ್ದುಕೊಳ್ಳುವ ಸಂದರ್ಭ ಬಂದಾಗ ಕಾಯ್ದುಕೊಳ್ಳಲೇಬೇಕು ಎಂದರು.