ಬೆಂಗಳೂರು: ಒಂದೆಡೆ ಬಿರು ಬೇಸಿಗೆ, ಇನ್ನೊಂದೆಡೆ ಕುಡಿಯುವ ನೀರಿಗೆ ತತ್ವಾರ. ಇದೆಲ್ಲದರ ಮಧ್ಯೆ ಚುನಾವಣೆಯ ಬಿಸಿ. ಹೀಗಿರುವಾಗಲೇ ಜನರು ನೆಮ್ಮದಿಯಾಗಿ ಬದುಕೋಕೆ ಅಂತ ಎಸಿ,ಫ್ಯಾನ್.ಕೂಲರ್ ಅಂತ ತಮ್ಮ ಅನುಕೂಲ ತಾವು ಹುಡುಕುತ್ತಿದ್ದಾರೆ. ಆದರೆ ಪ್ರಾಣಿ , ಪಕ್ಷಿಗಳು ಮಾತ್ರ ಕುಡಿಯೋಕೆ ಹನಿ ನೀರು, ತಿನ್ನೋಕೆ ಕಾಳು ಸಿಕ್ಕರೇ ಸಾಕು ಅಂತ ಪರದಾಡುತ್ತಿವೆ.ಹೀಗಿರುವಾಗಲೇ ಬಿಬಿಎಂಪಿ ಗುಬ್ಬಿ ಮೇಲೆ ಬ್ರಹ್ಮಾಸ್ತ ಎಂಬಂತೆ ಅಲ್ಲಿ ಇಲ್ಲಿ ಕಾಳು ತಿಂದು ಬದುಕೋ ಹಕ್ಕಿಗಳ ಹೊಟ್ಟೆ ಮೇಲೆ ಬರೆ ಎಳೆಯಲು ಮುಂದಾಗಿದೆ..
ಹೌದು ಬಿಬಿಎಂಪಿ ಎಲ್ಲ ನಿಯಮ ಮುಗಿಸಿ ಈಗ ಹಕ್ಕಿಗಳಿಗೆ ಕಾಳು ಹಾಕೋರ ಮೇಲೆ ಕಣ್ಣಾಕಿದ್ದು, ಅಲ್ಲೂ ದಂಡ ವಸೂಲಿಗೆ ಮುಂದಾಗಿದೆ. ಸಿಲಿಕಾನ್ ಸಿಟಿ, ಬೆಂದಕಾಳೂರು, ಉದ್ಯಾನನಗರಿ ಅಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರಿನಲ್ಲಿ ಮಾನವೀಯತೆಯೇ ಮರೆಯಾಗಿದೆ ಅನ್ನೋ ಮಾತಿದೆ. ಆದರೂ ಇಲ್ಲೊಂದಿಷ್ಟು ಪಕ್ಷಿಪ್ರಿಯ ಮನಸ್ಸುಗಳಿಗೆ ಪೆಟ್ಟುಬಿದ್ದಂತಾಗಿದೆ..
ವೈದ್ಯರ ಸಲಹೆ ಇಲ್ಲದೇ ಬಿಪಿ ಟ್ಯಾಬ್ಲೆಟ್ ಸೇವಿಸುತ್ತಿದ್ದೀರಾ!?- ಎಚ್ಚರ, ಚರ್ಮದ ಕ್ಯಾನ್ಸರ್ ಬರಬಹುದು!
ನಗರದ ಹಲವೆಡೆ ಪಾರಿವಾಳ ಸೇರಿದಂತೆ ಹಲವು ಜಾತಿಯ ಪಕ್ಷಿಗಳಿಗೆ ಕಾಳು ಹಾಗೂ ನೀರು ಹಾಕೋ ಪರಿಪಾಠವಿದೆ. ನಗರದ ರೇಸಕೋರ್ಸ್, ಜಿ.ಎಂ.ಪಾಳ್ಯ ಸಿಗ್ನಲ್, ರಾಗಿಗುಡ್ಡ ಆಂಜನೇಯ ದೇವಸ್ಥಾನ, ಮಲ್ಲೇಶ್ವರ, ಬಸವನಗುಡಿ ಸೇರಿದಂತೆ ಹಲವೆಡೆ ಸಾವಿರಾರು ಪಾರಿವಾಳಗಳಿಗೆ ಕಾಳು ಹಾಕಲಾಗುತ್ತದೆ.ಆದರೆ ಈಗ ಈ ಪಕ್ಷಿಗಳ ಆಹಾರ ನೀಡುವಿಕೆಗೂ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ. ಮೊದಲ ಹಂತವಾಗಿ ಬೆಂಗಳೂರಿನ ರೇಸ್ ಕೋರ್ಸ್ ಬಳಿಕ ಪಾರಿವಾಳಗಳಿಗೆ ಆಹಾರ ಹಾಕುವ ಪ್ರದೇಶದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ನೋಟಿಸ್ ಫಲಕ ಹಾಕಿದೆ.
ಇಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬಾರದು. ನಿಯಮ ಮೀರಿ ಆಹಾರ ಹಾಕಿದ್ರೇ 200 ರೂಪಾಯಿ ದಂಡ ವಿಧಿಸಲಾಗುವುದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.ಬಿಬಿಎಂಪಿಯ ಈ ಆದೇಶಕ್ಕೆ ನಗರದಾದ್ಯಂತ ಪಕ್ಷಿ ಹಾಗೂ ಪ್ರಾಣಿಪ್ರಿಯರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಒಟ್ಟಾರೆ, ಕೇವಲ ಬೆಳಗ್ಗೆ ಮತ್ತು ಸಂಜೆ ವೇಳೆ ಜನರು ಪಕ್ಷಿಗಳಿಗೆ ಆಹಾರ ನೀಡುತ್ತಾರೆ. ಆದರೆ ಇದರಿಂದ ಆಹಾರ ನೀಡುವ ಸ್ಥಳ ಗಲೀಜಾಗಿರುತ್ತದೆ ಎಂದು ಕೆಲವರು ಆರೋಪಿಸಿದ್ದಾರಂತೆ. ಇದೇ ಕಾರಣಕ್ಕೆ ಬಿಬಿಎಂಪಿ ಆಹಾರ ವಿತರಿಸದಂತೆ ಸೂಚಿಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಕಾರಣ ಏನೇ ಇರಲಿ ಬಿಬಿಎಂಪಿಯ ಪಕ್ಷಿಗಳಿಗೆ ಆಹಾರ ಹಾಕದಂತೆ ನೀಡಿರೋ ಆದೇಶ ಮಾತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.