ದೊಡ್ಡಬಳ್ಳಾಪುರ : ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಹೋರಟಿರುವ ಭೂಮಿಗೆ ಸೂಕ್ತ ಪರಿಹಾರ ನೀಡದ ಹೊರತು ಭೂಮಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಏಳು ದಿನಗಳ ಗಡುವು ಪಡೆದಿರುವ ಅಧಿಕಾರಿಗಳು ನಮ್ಮ ಭೂಮಿಗೆ ಸೂಕ್ತ ದರ ನಿಗದಿ ಮಾಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಮಾಜಿ ಟಿಎಪಿಎಂಸಿಎಸ್ ಅಧ್ಯಕ್ಷರಾದ ಎಂ.ಆನಂದ್ ತಿಳಿಸಿದರು.
ತಾಲ್ಲೂಕಿನ ಕೊನಘಟ್ಟ ಗ್ರಾಮದ ಕಾಮನಬಂಡೆಯ ಸಮೀಪ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅವೈಜ್ಞಾನಿಕ ದರ ನಿಗದಿ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವದಿ ಧರಣಿ 68 ದಿನಗಳು ಮುಟ್ಟಿದ್ದು, ಇಂದು ಧರಣಿ ಸ್ಥಳದಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳ ಜೊತೆಗೆ ಈಗಾಗಲೇ 4-5 ಬಾರಿ ಸಮಾಲೋಚನಾ ಸಭೆ ನಡೆಸಿದ್ದೇವೆ. ಪ್ರತಿಭಾರಿ ಸಭೆ ಕರೆದಾಗಲೂ ಅಧಿಕಾರಿಗಳು ಕೇಳಿದ ಪ್ರಶ್ನೆಗಳನ್ನೇ ಕೇಳುತ್ತಾರೆ. ಸಭೆಯ ಕೊನೆಗೆ ನಾವು ಬೆಲೆ ನಿಗದಿ ಮಾಡಲು ಸಾಧ್ಯವಿಲ್ಲ, ಭೋರ್ಡ್ ಸಭೆ ಕರೆದು ತೀರ್ಮಾನ ಮಾಡತ್ತೇವೆ ಎಂದು ಹೇಳಿ ಕಳುಹಿಸುತ್ತಾರೆ ಎಂದು ಆರೋಪಿಸಿದರು.
ನಮ್ಮ ಗ್ರಾಮಗಳಲ್ಲಿ ಈಗಾಗಲೇ ಎತ್ತಿನಹೊಳೆ ಕಾಮಗಾರಿ ನೆಡೆಯುತ್ತಿದ್ದು. ಕಾಮಗಾರಿಗೆ ಒಳಪಟ್ಟ ರೈತರ ಭೂಮಿಗೆ 1:4ದರ ನಿಗದಿ ಪಡಿಸಿದ್ದಾರೆ. ಅಂತೆಯೇ ಕೆಐಎಡಿಬಿ ಸಹ ನಮ್ಮ ರೈತರ ಫಲವತ್ತಾದ ಭೂಮಿಗೆ ಸೂಕ್ತ ದರ ನಿಗದಿ ಮಾಡಲಿ ಎಂದು ಆಗ್ರಹಿಸಿದರು.
ಅಧಿಕಾರಿಗಳು ಫಲವತ್ತಾದ ನಮ್ಮ ಕೃಷಿ ಭೂಮಿಗೆ 2013 ರ ಭೂಸ್ವಾಧೀನ ಕಾಯ್ದೆ ಅನ್ವಯ ಸೂಕ್ತ ಪರಿಹಾರ ನಿಗದಿಪಡಿಸುವಲ್ಲಿ ವಿಫಲರಾಗಿದ್ದು. ಇದು ಅಧಿಕಾರಿಗಳಿಗೆ ರೈತರು ನೀಡುತ್ತಿರುವ ಕೊನೆಯ ಎಚ್ಚರಿಕೆಯಾಗಿದೆ. ಅಧಿಕಾರಿಗಳು ನಮ್ಮ ಭೂಮಿಗೆ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಡಿಹಳ್ಳಿ, ಕೊನಘಟ್ಟ, ನಾಗದೇನಹಳ್ಳಿ ಮತ್ತು ಆದಿನಾರಾಯಣ ಹೊಸಹಳ್ಳಿಯ ರೈತರು ಸರ್ವಾನುಮತದಿಂದ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ರಾಮಾಂಜಿನಪ್ಪ ಅವರು ಮಾತನಾಡಿ ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳ ರೈತರ 971-00 ಎಕರೆ ಭೂಮಿಯ ಸ್ವಾದಿನಕ್ಕೆ ಕೆಐಎಡಿಬಿ ಮುಂದಾಗಿದ್ದು 2013 ರ ಕಾಯ್ದೆಯ ಮಾನದಂಡದಂತೆ 1:4 ರಂತೆ ಬೆಲೆ ನಿಗದಿ ಮಾಡುವ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ, ರೈತರ ಫಲವತ್ತಾದ ಭೂಮಿಯನ್ನು ಕಬಳಿಸುತ್ತಿರುವ ಕೆಐಎಡಿಬಿ ಅಧಿಕಾರಿಗಳಿಗೆ ಸೂಕ್ತ ದರ ನಿಗದಿ ಪಡಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಕೆಲ ಏಜೆಂಟ್ಗಳ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಏಜೆಂಟ್ ಗಳ ಸಮಸ್ಯೆಯಿಂದಾಗಿ 704 ರೈತರ ಜೀವನ ಹಾಳಾಗುತ್ತಿದೆ. ಸರ್ಕಾರ ರೈತರ ಪರ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ ಕೆಐಎಡಿಬಿ ಅಧಿಕಾರಿಗಳು ಕೆಲ ಏಜೆಂಟ್ ಮೂಲಕ ರೈತರ ಭೂ ದಾಖಲಾತಿಗಳನ್ನು ಸಂಗ್ರಹ ಮಾಡಿಸಿದ್ದು. ಈ ಕುರಿತು ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಅಂತಹ ರೈತರಿಗೆ ಸೂಕ್ತ ದರ ನಿಗದಿ ಮಾಡದೇ ಹಣ ಬಿಡುಗಡೆ ಮಾಡದಂತೆ ಒತ್ತಾಯ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದು ಮಾರ್ಚ್ 7ರವರೆಗೂ ಗಡುವು ಪಡೆದಿದ್ದಾರೆ..
ರೈತರ ಭೂಮಿಗೆ ದರ ನಿಗದಿ ಕುರಿತು ಇನ್ನೂ 7 ದಿನಗಳಲ್ಲಿ ಮತ್ತೊಂದು ಸಭೆ ಕರೆ ಕರೆದಿದ್ದು. ಅಧಿಕಾರಿಗಳು ರೈತಪರ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ರೈತ ಮುಖಂಡರಾದ ನರಸಿಂಹ ಮೂರ್ತಿ, ರಾಮಾಂಜಿನಪ್ಪ, ವೆಂಕಟೇಶ್, ರಮೇಶ್, ಮಹೇಶ್, ನಾಗರಾಜು, ಕೃಷ್ಣಪ್ಪ ಕೋಡಿಹಳ್ಳಿ, ಬೈರೇಗೌಡ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.