ಉತ್ತರ ಕನ್ನಡ: ಬಹು ನಿರೀಕ್ಷಿತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಕೊನೆಗೂ ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಈ ಮೂಲಕ ಅವರ ಗೆಲುವಿಗೆ ಪಕ್ಷದ ಹೈಕಮಾಂಡ್ ನಾನಾ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ಬಿಜೆಪಿಯ ಭದ್ರಕೋಟೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಈ ಬಾರಿಯಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ರೂಪಿಸಿದೆ.
ಯೋಜನೆಯಂತೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಮರಾಠರೇ ಅಧಿಕ ಸಂಖ್ಯೆಯಲ್ಲಿರುವ ಕಿತ್ತೂರು, ಖಾನಾಪುರ ಭಾಗದಲ್ಲೇ ಕಾಂಗ್ರೆಸ್ಗೆ ಪ್ರತಿ ಬಾರಿ ಹಿನ್ನಡೆ ಆಗುತ್ತಿತ್ತು. ಈ ಸಲ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಕಾಂಗ್ರೆಸ್ ಮರಾಠ ಸಮುದಾಯದ ಅಭ್ಯರ್ಥಿಯಾದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ಗೆ ಟಿಕೆಟ್ ಘೋಷಣೆ ಮಾಡಿ ದಾಳ ಉರುಳಿಸಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರ ಬಹು ದೊಡ್ಡ ಸಮುದಾಯಗಳಲ್ಲಿ ಕ್ಷತ್ರಿಯ ಮರಾಠಾ ಸಮುದಾಯ ಕೂಡ ಒಂದಾಗಿದೆ. ಕಿತ್ತೂರು, ಖಾನಾಪುರ ಮಾತ್ರವಲ್ಲದೆ, ಹಳಿಯಾಳ, ಕಾರವಾರ ಮುಂತಾದ ತಾಲೂಕುಗಳಲ್ಲಿ ಕೂಡ ಈ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಂತೆಯೇ, ಈಗ ಕಾಂಗ್ರೆಸ್ ಘೋಷಿಸಿರುವ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಕೂಡ ಇದೇ ಸಮುದಾಯಕ್ಕೆ ಸೇರಿದವರು ಎನ್ನುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬುದಾಗಿ ಪಕ್ಷದ ಪ್ರಮುಖರು ತಿಳಿಸುತ್ತಾರೆ.
ಇನ್ನೊಂದೆಡೆ ಲೋಕಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯ ಘೋಷಣೆಯ ಮೂಲಕ ಕ್ಷೇತ್ರದ ಬಹುದೊಡ್ಡ ಸಂಖ್ಯೆಯ ಮಹಿಳಾ ಮತದಾರರನ್ನು ಸೆಳೆಯುವುದಕ್ಕೆ ಕೂಡ ಪಕ್ಷದ ವರಿಷ್ಠರು ಯೋಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಸ್ಕೀಮ್ಗಳಾದ ಶಕ್ತಿ ಯೋಜನೆ, ಗೃಹಲಕ್ಷಿ ಯೋಜನೆಗಳ ನೇರ ಫಲಾನುಭವಿಗಳ ಮನ ಒಲಿಸಿ ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸುವ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಡಾ.ಅಂಜಲಿ ಅವರನ್ನು ಕಣಕ್ಕಿಳಿಸಿದೆ ಎನ್ನಲಾಗುತ್ತಿದೆ.