ನವದೆಹಲಿ: ಪಕ್ಷವು ಆರ್ಥಿಕವಾಗಿ ಸೊರಗುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
“ನಾವು ಇಂದು ಪ್ರಸ್ತಾಪಿಸುತ್ತಿರುವ ವಿಷಯ ಬಹಳ ಗಂಭೀರವಾಗಿದೆ. ಈ ಸಮಸ್ಯೆ ಕಾಂಗ್ರೆಸ್ ಅನ್ನು ಮಾತ್ರವಲ್ಲದೆ, ನಮ್ಮ ಪ್ರಜಾಪ್ರಭುತ್ವಕ್ಕೇ ಹೆಚ್ಚು ಮೂಲಭೂತವಾಗಿ ಅಪಾಯಕಾರಿಯಾಗಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ದುರ್ಬಲಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ. ಜನರಿಂದ ಸಂಗ್ರಹಿಸಿದ ದೇಣಿಗೆಗಳನ್ನು ತಡೆ ಹಿಡಿಯಲಾಗುತ್ತಿದೆ ಮತ್ತು ನಮ್ಮ ಖಾತೆಗಳಿಂದ ಬಲವಂತವಾಗಿ ಹಣ ಕಿತ್ತುಕೊಳ್ಳಲಾಗುತ್ತಿದೆ” ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.
“ಇಂತಹ ಅತ್ಯಂತ ಸವಾಲಿನ ಸಂದರ್ಭದಲ್ಲಿಯೂ, ನಮ್ಮ ಚುನಾವಣಾ ಪ್ರಚಾರದ ಪರಿಣಾಮಕಾರಿತ್ವವನ್ನು ಕಾಪಾಡಲು ನಮ್ಮ ಶಕ್ತಿಮೀರಿ ಪ್ರಯತ್ನ ನಡೆಸುತ್ತಿದ್ದೇವೆ. ಒಂದು ಕಡೆ ಎಲೆಕ್ಟೊರಲ್ ಬಾಂಡ್ ಸಮಸ್ಯೆ ಇದೆ. ಅದನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ಎಲೆಕ್ಟೊಲರ್ ಬಾಂಡ್ಗಳು ಎಲ್ಲರಿಗೂ ತಿಳಿದಿರುವಂತೆ ಬಿಜೆಪಿಗೆ ಭಾರಿ ಪ್ರಮಾಣದಲ್ಲಿ ಲಾಭ ನೀಡಿದೆ” ಎಂದು ಆರೋಪಿಸಿದರು.
“ಇನ್ನೊಂದೆಡೆ, ಪ್ರಮುಖ ವಿರೋಧ ಪಕ್ಷದ ಆರ್ಥಿಕತೆಯು ತೀವ್ರ ಹಲ್ಲೆಗೆ ಒಳಗಾಗುತ್ತಿದೆ. ಇದು ಹಿಂದೆಂದೂ ನಡೆಯದ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ಹೇಳಿದರು.