ಶಿವಮೊಗ್ಗ: ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಮಾತ್ರ ತಾನು ಅಸಮಾಧಾನಗೊಂಡಿಲ್ಲ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಮಾತ್ರ ತಾನು ಅಸಮಾಧಾನಗೊಂಡಿಲ್ಲ, ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ಮತ್ತು ಹಿಂದೂತ್ವ ಉಳಿಸಲು ಹೋರಾಟ ಮಾಡುತ್ತಿರುವುದಾಗಿ ಹೇಳಿದರು.
ರಾಷ್ಟ್ರಮಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪರಿವಾರವಾದವನ್ನು ವಿರೋಧಿಸುವ ಹಾಯೆಯೇ ತಾನು ಕರ್ನಾಟಕದಲ್ಲಿ ಯಡಿಯೂರಪ್ಪರ ಕುಟುಂಬ ವಾದದ ವಿರುದ್ಧ ಸೆಡ್ಡು ಹೊಡೆದಿರುವೆ ಎಂದು ಈಶ್ವರಪ್ಪ ಹೇಳಿದರು. ಅವರ ಒಬ್ಬ ಮಗ ಸಂಸದನಾಗಿದ್ದಾರೆ ಮತ್ತೊಬ್ಬ ಶಾಸಕನಾಗಿದ್ದಾರೆ ಮತ್ತು ಅವರು ಕೇಂದ್ರ ಚುನಾವಣಾ ಮಂಡಳಿಯ ಸದಸ್ಯರಾಗಿದ್ದಾರೆ. ಅಷ್ಟಾಗಿಯೂ ಅವರು ವಿಧಾನಸಭಾ ಚುನಾವಣೆಯ ಆರು ತಿಂಗಳ ಬಳಿಕ ದೆಹಲಿಗೆ ಹೋಗಿ ತಮ್ಮ ಮಗನಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದರು ಎಂದು ಈಶ್ವರಪ್ಪ ಹೇಳಿದರು.
ಹಿಂದೂತ್ವವಾದಿಗಳಾಗಿರುವ ಸಿಟಿ ರವಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸದಾನಂದಗೌಡರನ್ನು ಯಡಿಯೂರಪ್ಪ ಮೂಲೆಗುಂಪು ಮಾಡಿದರು ಎಂದು ಈಶ್ವರಪ್ಪ ಹೇಳಿದರು. ಸದಾನಂದಗೌಡರು ಹೇಳಿರುವ ಹಾಗೆ ರಾಜ್ಯ ಬಿಜೆಪಿಯ ಶುದ್ಧೀಕರಣ ಆಗಬೇಕಿದೆ ಎಂದು ಹೇಳಿದ ಮಾಜಿ ಸಚಿವ ತಾವೆಲ್ಲ ಸೇರಿ ಅದನ್ನು ಮಾಡುತ್ತೇವೆ ಅಂದರು.