ಮೈಸೂರು : ಸಿದ್ದರಾಮಯ್ಯ ದುರಂಹಕಾರದ ಮಾತು ಬಿಡಬೇಕು. ಮೈಸೂರು ಮಹಾರಾಜರ ಕೊಡುಗೆ ಅನನ್ಯವಾದದ್ದು. ಮಹಾರಾಜರು ಮಾಡಿರುವ ಎಳ್ಳಷ್ಟು ಕೆಲಸವನ್ನು ಮಾಡಲು ನಿಮ್ಮ ಕೈಲಿ ಆಗಿದೆಯಾ? ಮೈಸೂರಿಗೆ ನಿಮ್ಮ ಕೊಡುಗೆ ಏನು? ರಾಜ ಮನೆತನದ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಿ ಎಂದು ಮಾಜಿ ಡಿಸಿಎಂ ಡಾ ಸಿಎನ್ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಈ ಮೂಲಕ ಯದುವೀರ್ ಯಾವ ಮಹಾರಾಜ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್ನವರು ಮೂರು ಸೀಟು ಕೇಳಿದ್ದರು. ವರಿಷ್ಠರ ಹಂತದಲ್ಲಿ ಎಲ್ಲವೂ ತೀರ್ಮಾನ ಆಗಲಿದೆ. ನಾವು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಎಚ್ಡಿ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರನ್ನೂ ರಾಜ್ಯದಾದ್ಯಂತ ಪಕ್ಷದ ಪ್ರಚಾರಗಳಿಗೆ ಮುಂದಿನ ದಿನಗಳಲ್ಲಿ ಆಹ್ವಾನಿಸಲಾಗುವುದು ಎಂದು ಹೇಳಿದರು.