ಬೆಂಗಳೂರು: ನಾನು ಪಕ್ಷ ಬಿಡುವುದಿಲ್ಲ. ಬಿಜೆಪಿಯಲ್ಲೇ (BJP) ಇದ್ದು ಶುದ್ದೀಕರಣದ ಕಡೆಗೆ ನಾನು ಗಮನ ನೀಡುತ್ತೇನೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ. ಹಾಗೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಧಾನ ಹೊರಹಾಕಿದ್ದಾರೆ.
ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎನ್ಡಿಎಗೆ ಜೆಡಿಎಸ್ ಸೇರ್ಪಡೆ ಆಗಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ಪಕ್ಷಕ್ಕೆ ಜೀವ ತೇಯ್ದವರನ್ನು ಕಡೆಗಣಿಸಬಾರದು ಎಂದು ಹೇಳಿರುವ ಸದಾನಂದಗೌಡ, ನನ್ನ ಎಲ್ಲಾ ಮಾತುಗಳೂ ಕರ್ನಾಟಕ ಬಿಜೆಪಿಗೆ ಸೀಮಿತವಾಗಿದೆ. ನಾನೊಬ್ಬ ಕನ್ನಡಿಗನಾಗಿ ಮಾತಾಡುತ್ತಿದ್ದೇನೆ. ಬಿಜೆಪಿ ಶುದ್ದೀಕರಣ ಮಾಡುವವರೆಗೆ ನಾನು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.
ಸ್ಫರ್ಧೆ ಮಾಡಿ ಅಂತಾ ನನ್ನ ಆರತಿ ಮಾಡಿ ಕರೆದುಕೊಂಡು ಬಂದು ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ. ಚುನಾವಣೆ ಬಳಿಕ ಶುದ್ದೀಕರಣಕ್ಕೆ ವೇಗ ಕೊಡುತ್ತೇನೆ. ಸಮಾನ ಮನಸ್ಕರ ಸಭೆ ಕರೆಯುತ್ತೇನೆ ಎಂದು ಸದಾನಂದಗೌಡ ಹೇಳಿದ್ದಾರೆ. ಪಕ್ಷ ಶುದ್ಧೀಕರಣ ಒಬ್ಬನಿಂದ ಆಗುವ ಕೆಲಸವಲ್ಲ. ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳು. ನಮ್ಮ ಮನೆಯವರಿಗೆ, ಸಂಬಂಧಿಗಳಿಗೆ, ಚೇಲಾಗಳಿಗೆ. ಎಲ್ಲವೂ ನಮಗೇ ಸಿಗಬೇಕು ಎಂದು ಸ್ವಾರ್ಥಿಗಳಾಗಿದ್ದಾರೆ. ಕಾರ್ಯಕರ್ತರಿಗೆ ಯಾವುದೇ ಅವಕಾಶ ಕೊಡುತ್ತಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ವಿರುದ್ಧ ಸದಾನಂದಗೌಡ ಆಕ್ರೋಶ ಹೊರಹಾಕಿದರು.
ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ನನಗೆ ನೋವಾಗಿದೆ. ನನಗೆ ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ಸತ್ಯ ಎಂದು ಸದಾನಂದಗೌಡ ಹೇಳಿದರು. ಪಕ್ಷ ಶುದ್ಧೀಕರಣ ನನ್ನ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ. ಮುಂದಿನ ನಡೆ ಏನು ಎಂದು ಹಲವರು ಕೇಳಿದ್ದಾರೆ. ನನ್ನ ಮುಂದಿನ ನಡೆ ಪಕ್ಷ ಶುದ್ಧೀಕರಣ. ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.