ತುಮಕೂರು: ಕುಕ್ಕರ್ ನನಗೆ ಯಾಕೆ ಕೊಡಲಿಲ್ಲ ಎಂದು ಕೇಳಿದ್ದಕ್ಕೆ ವಯೋವೃದ್ಧ ಮಹಿಳೆಯ ಮೇಲೆ ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಎಂಬಾತನಿಂದ ಹಲ್ಲೆ ಆರೋಪ ಕೇಳಿಬಂದಿದೆ. ಹೌದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಆಮಿಷಾ ಆರೋಪ ಈಗಾಗಲೇ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮ ಗಂಗಮ್ಮ ಎಂಬ ವಯೋವೃದ್ಧ ಮಹಿಳೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಗೆ ಮತ ನೀಡುವಂತೆ ಆಮಿಷ ಒಡ್ಡಲಾಗಿತ್ತು. ಉಜ್ಜಿನಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಕುಕ್ಕರ್ ಹಂಚಿದ್ದರು ಎನ್ನಲಾಗಿದೆ. ಈ ವೇಳೆ ಗ್ರಾಮದಲ್ಲಿ ಗಂಗಮ್ಮ ಇರಲಿಲ್ಲ. ಬಳಿಕ ವಿಚಾರ ತಿಳಿದು ಇಂದು ನಾರಾಯಣ್ ಬಳಿ ಕುಕ್ಕರ್ ಕೇಳಿದ್ದಕ್ಕೆ
ಕೋಪಗೊಂಡ ನಾರಾಯಣ್ ಗಂಗಮ್ಮನಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಹಲ್ಲೆಯ ವೇಳೆ ಗಂಗಮ್ಮನ ಕೈ ಬಳೆ ಕಿವಿಯ ಓಲೆ ಮುರಿದು ಹೋಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಹಲ್ಲೆಗೊಳಗಾದ ಗಂಗಮ್ಮಗೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಘಟನೆ ಸಂಬಂಧ ಹೂಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.