ಕೋಲಾರ: ಶ್ರೀರಾಮನ ಫ್ಲೆಕ್ಸ್, ಹಿಂದೂ ಧ್ವಜ ತೆರವುಗೊಳಿಸಿ ತಿಪ್ಪೆಗೆಸೆದು ಅಪಮಾನ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಎರಡು ದಿನಗಳಲ್ಲಿ ಅಮಾನತುಗೊಳಿಸದಿದ್ದರೆ ಪ್ರತಿಭಟನೆಗೆ ಮುಂದಾಗ ಬೇಕಾಗುತ್ತದೆ ಎಂದು ಸಂಸದ ಎಸ್. ಮುನಿಸ್ವಾಮಿ ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನ ಫ್ಲೆಕ್ಸ್, ಧ್ವಜದಲ್ಲಿ ಯಾವುದೇ ರಾಜಕೀಯ ವ್ಯಕ್ತಿಯ ಭಾವ ಚಿತ್ರ ಇರಲಿಲ್ಲ. ರಾಮನ ಧ್ವಜ ತೆರವುಗೊಳಿಸಿದ ಮಾದರಿಯಲ್ಲಿಯೇ ಮಸೀದಿಗಳ ಮೇಲೆ ಹಾರಾಡುತ್ತಿರುವ ಅನ್ಯ ದೇಶದ ಧ್ವಜಗಳನ್ನೂ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗನಿಂದ ಹಿಂದೂ ವಿರೋಧಿ ಚಟುವಟಿಕೆಗಳು ಮಿತಿ ಮೀರಿವೆ. ಬಕ್ರಿದ್ ದಿನ ಕ್ಲಾಕ್ ಟವರ್ನಲ್ಲಿ ತಲ್ವಾರ್ ಬಾಗಿಲು ನಿರ್ಮಿಸಲು, ಟಿಪ್ಪು ಸುಲ್ತಾನ್, ಬಾಬರ್ ಫ್ಲೆಕ್ಸ್ ಅಳವಡಿಸಲು ಅನುಮತಿ ಬೇಕಾಗಿಲ್ಲ. ರಾಮನ ಫ್ಲೆಕ್ಸ್ ಅಳವಡಿಸಲು ಕಡ್ಡಾಯವಾಗಿ ಅನುಮತಿ ಬೇಕು. ಟವರ್ನಲ್ಲಿ ತಲ್ವಾರ್ ಅಳವಡಿಸಿರುವ ಬಗ್ಗೆ ಡಿಸಿ, ಎಸ್ಪಿ ಅವರನ್ನು ಕೇಳಿದಾಗ ಗಮನಕ್ಕೆ ಬಂದಿಲ್ಲ ಎಂದಿದ್ದರು. ಇವರೆಲ್ಲಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.