ಮೈಸೂರು: ಎಲೆಕ್ಟ್ರಿಕ್ ಸ್ಕೂಟರ್ ನಿಂದ ಹೊತ್ತಿಕೊಂಡ ಬೆಂಕಿಯಿಂದ ಇಡೀ ಮನೆ ಹಾಗೂ ಕಾರು ಸುಟ್ಟು ಭಸ್ಮವಾಗಿರುವ ಘಟನೆ ಕುಂಬಾರಕೊಪ್ಪಲಿನ ಸ್ಮಶಾನ ರಸ್ತೆಯ ಬಳಿ ನಡೆದಿದೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಗುಂಡಪ್ಪಗೌಡರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಇಲೆಕ್ಟ್ರಿಕ್ ಬೈಕ್ ಚಾರ್ಜ್ ಗೆ ಇಟ್ಟು ಮಲಗಿದ್ದಾರೆ. ಚಾರ್ಜರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.
ಪಕ್ಕದಲ್ಲೇ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ತಗುಲಿ,ಬಳಿಕ ಎಸ್.ಯು.ವಿ ಕಾರಿಗೂ ವ್ಯಾಪಿಸಿದೆ. ನಂತರ ತಳ ಅಂತಸ್ತಿನ ಮನೆಗೆ ಬೆಂಕಿ ವ್ಯಾಪಿಸಿ ಪೀಠೋಪಕರಣಗಳೆಲ್ಲವೂ ಸುಟ್ಟು ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಳ್ಳು ತ್ತಿದ್ದಂತೆ ಮನೆಯಲ್ಲಿದ್ದ ಎಲ್ಲರೂ ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.