ಶಿವಮೊಗ್ಗ:- ನಾನು ಸ್ವತಂತ್ರವಾಗಿ ಸ್ಪರ್ಧಿಸಿದರೆ ಪಕ್ಷ ಏನು ಮಾಡಲು ಸಾಧ್ಯ? ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮನವೊಲಿಕೆಗೆ ಯಾರೇ ಬಂದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ, ಸ್ಪರ್ಧೆ ಮಾಡುವುದು ಅಚಲ. ಸ್ಪರ್ಧಿಸಿದರೆ ಪಕ್ಷ ಏನು ಮಾಡಲು ಸಾಧ್ಯ?. ಹೆಚ್ಚೆಂದರೆ ಉಚ್ಚಾಟನೆ ಮಾಡಬಹುದು.
ಗೆದ್ದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿರುವ ಕೆ.ಎಸ್. ಈಶ್ವರಪ್ಪ ಹೇಳಿದರು.
ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪನವರು ಮನೆಗೆ ಹೋಗಿ ಮರಳಿ ಕರೆದುಕೊಂಡು ಬಂದರು. ಬೆಳಗಾವಿ ಟಿಕೆಟ್ ಕೂಡಾ ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು. ನಾನು ಗೆದ್ದರೆ ನಾಳೆ ಪಕ್ಷ ನನ್ನನ್ನು ಸೇರಿಸಿಕೊಳ್ಳುವುದಿಲ್ಲವೆ? ಸೇರಿಸಿಕೊಳ್ಳಲೇಬೇಕು ಎಂದು ಹೇಳಿದರು.
ಸದ್ಯಕ್ಕೆ ನನ್ನ ಸ್ಪರ್ಧೆಯನ್ನು ತಡೆಯುವ ವಿಫಲ ಪ್ರಯತ್ನವನ್ನು ಬಿಜೆಪಿ ಮುಖಂಡರು ನಿಲ್ಲಿಸಲಿ. ನನ್ನ ಈ ಸ್ಪರ್ಧೆ ಪಕ್ಷದ, ಮೋದಿ ವಿರುದ್ಧ ಅಲ್ಲ. ಕುಟುಂಬ ರಾಜಕಾರಣ, ಯಡಿಯೂರಪ್ಪನವರ ಸರ್ವಾಧಿಕಾರದ ವಿರುದ್ಧ. ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದವರ ಸ್ವತ್ತಲ್ಲ. ನಾನೂ ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆ ಪಾಠ ಕಲಿಸುತ್ತದೆ. ನನ್ನಂತೆ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ, ಪ್ರತಾಪ್ ಸಿಂಹ, ಡಿ.ವಿ. ಸದಾನಂದಗೌಡ ಅವರಿಗೂ ಯಡಿಯೂರಪ್ಪ ಅವರ ಕುಟುಂಬ ಲೋಕಸಭೆಗೆ ಟಿಕೆಟ್ ನೀಡದೇ ವಂಚಿಸಲಾಗಿದೆ ಎಂದು ಆರೋಪಿದರು. ಆಗ ಯಡಿಯೂರಪ್ಪ, ಈಗ ವಿಜಯೇಂದ್ರಗೆ ಜೈಕಾರ ಹಾಕುತ್ತಾ ಇರಬೇಕೇನು. ವಿಜಯೇಂದ್ರ ಮುಖ್ಯಮಂತ್ರಿ ಆಗುವುದನ್ನು ನಾವು ನೋಡುತ್ತಾ ಕುಳಿತಿರಬೇಕೇನು? ಎಂದು ಈಶ್ವರಪ್ಪ ಪ್ರಶ್ನಿಸಿದರು.
ನಾನು ನನ್ನ ಪುತ್ರನಿಗಾಗಿ ಸ್ಪರ್ಧಿಸುತ್ತಿಲ್ಲ. ಪಕ್ಷ ಸರಿಪಡಿಸಲು ಈ ಸ್ಪರ್ಧೆ. ಈಗ ನನ್ನ ಪುತ್ರ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ನೀಡುತ್ತೇನೆ ಎಂದರೂ ಅದು ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.