ಕಂಪ್ಲಿ:- ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿ 3 ದಿನಗಳು ಕಳೆದರೂ ಸಹ ತಾಲೂಕಿನಲ್ಲಿನ ವಿವಿಧ ಕಾಮಗಾರಿಗಳ ನಾಮಫಲಕಗಳ ಮೇಲಿನ ಜನ ಪ್ರತಿನಿಧಿಗಳ ಹೆಸರು ಗೋಚರಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಮಾ.17ರಂದು ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಎರಡನೇ ಹಂತದಲ್ಲಿ ಮೇ 7ರಂದು ಬಳ್ಳಾರಿಯಲ್ಲಿ ಚುನಾವಣೆ ಜರುಗಲಿವೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೆರೆಮರೆಯಲ್ಲಿ ಕಸರತ್ತನ್ನು ಆರಂಭಿಸಿದ್ದಾರೆ. ಚುನಾವಣಾ ಆಯೋಗದ ಆದೇಶದ ಮೇರೆಗೆ ತಾಲೂಕಿನಲ್ಲಿನ ಚುನಾವಣಾ ಪ್ರಚಾರದ ಬ್ಯಾನರ್ ಗಳ ಅಳವಡಿಕೆ, ಪ್ಲೇಕ್ಸ್ ಗಳ ಅಂಟಿಸುವುದಕ್ಕೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರಲ್ಲದೆ, ಬ್ಯಾನರ್ ಗಳು, ಫ್ಲಕ್ಸ್ ಗಳನ್ನು ತೆರವುಗೊಳಿಸಿದ್ದು, ಕಾಮಗಾರಿಗಳ ಫಲಕಗಳು ಹಾಗೂ ಶಿಲಾ ಶಾಸನಗಳ ಮೇಲೆ ಕಾಲಿ ಕಾಗದವನ್ನು ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಆದರೂ ಅದು ಪರಿಪೂರ್ಣವಾಗಿ ಜರುಗಿಲ್ಲ. ಈ ರೀತಿ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆಯ ಕಟ್ಟುಪಾಡುಗಳನ್ನು ಸರಿಯಾಗಿ ಪಾಲಿಸದಿದ್ದರೆ ಚುನಾವಣೆ ಸುಸೂತ್ರವಾಗಿ ಜರಗುವುದಾದರೂ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಾಮಗಾರಿಗಳ ನಾಮ ಫಲಕಗಳ ಮೇಲಿನ ಜನಪ್ರತಿನಿಧಿಗಳ ಹೆಸರು ಗೋಚರ :
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಮೇಲಿರುವ ಶಾಸಕ ಜೆ.ಎನ್.ಗಣೇಶ್ ಅವರ ಹೆಸರನ್ನು ಮರೆ ಮಾಚಾಲಾಗಿಲ್ಲ. ಇನ್ನು ಎಪಿಎಂಸಿ ಯಲ್ಲಿನ ಬಿತ್ತಿ ಪತ್ರ ಒಂದಕ್ಕೆ ಕಾಟಚಾರಕ್ಕೆ ಬಣ್ಣ ಬಳೆದಿದ್ದು ಅದರಲ್ಲಿನ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹಾಗೂ ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಭಾವಚಿತ್ರ ಮತ್ತು ಹೆಸರು ಗೋಚರವಾಗುತ್ತಿದೆ. ಈ ಕುರಿತು ಅಧಿಕಾರಿಗಳು ಗಮನಹರಿಸಿ ಕಾಮಗಾರಿಗಳ ನಾಮಫಲಕಗಳು ಹಾಗೂ ಬಿತ್ತಿ ಪತ್ರಗಳ ಮೇಲಿನ ಜನಪ್ರತಿನಿಧಿಗಳ ಹೆಸರು ಗೋಚರಿಸದಂತೆ ಕ್ರಮವಹಿಸಬೇಕಿದೆ.
ಕೋಟ್ : ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಹಲವೆಡೆ ಕಾಮಗಾರಿಗಳ ನಾಮಫಲಕಗಳು ಹಾಗೂ ಬಿತ್ತಿ ಪತ್ರಗಳ ಮೇಲಿನ ಜನಪ್ರತಿನಿಧಿಗಳ ಹೆಸರುಗಳು ಗೋಚರಿಸುತ್ತಿದ್ದು, ಈ ಕುರಿತು ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಜರುಗಿಸುವ ಮೂಲಕ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು.