ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಲಕಂಟಕ ಎದುರಾಗಿರುವುದು ಅಕ್ಷರಶಃ ಸತ್ಯ. ಕುಡಿಯುವ ನೀರಿಗಾಗಿ ರಾಜಧಾನಿ ಬೆಂಗಳೂರು ಮಂದಿ ಪಡುತ್ತಿರುವ ಪಾಡು ದೇವರಿಗೆ ಪ್ರೀತಿ.
ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿದ್ದರಾಮಯ್ಯ, ಹಲವು ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿ, ಬೆಂಗಳೂರಿಗೆ ಅಗತ್ಯ ಇರುವ ನೀರಿನಲ್ಲಿ 1,450 ಎಂಎಲ್ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್ಡಿ ನಗರದ ಬೋರ್ವೆಲ್ಗಳಿಂದ ಪೂರೈಸಲಾಗುತ್ತಿದೆ. 500 ಎಂಎಲ್ಡಿ ನೀರಿನ ಕೊರತೆ ಇದೆ ಎಂದು ಅವರು ತಿಳಿಸಿದ್ದಾರೆ.
ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸರ್ಕಾರ ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಅವರು ಹೇಳಿದ್ದಾರೆ. ನೀರು ವ್ಯರ್ಥವಾಗುವುದನ್ನು ತಡೆಯಲು ಅಧಿಕಾರಿಗಳು 143 ಕಾರ್ಯಪಡೆ ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಇವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನಾಗರಿಕರು ನೀರು ಪೋಲು ಮಾಡುವುದಕ್ಕೆ ಸಂಬಂಧಿಸಿದ ದೂರುಗಳನ್ನು ಸಹಾಯವಾಣಿ 1916 ಅಥವಾ ವಾಟ್ಸಾಪ್ನಲ್ಲಿ ಸಲ್ಲಿಸಬಹುದು. ಬಂದಿರುವ ದೂರುಗಳನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ನಗರದಲ್ಲಿ 14,000 ಬೋರ್ವೆಲ್ಗಳ ಪೈಕಿ 6,900 ಬೋರ್ವೆಲ್ಗಳು ಬತ್ತಿ ಹೋಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ 55 ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 110 ಗ್ರಾಮಗಳ ಅಗತ್ಯತೆಗಳನ್ನು ಪೂರೈಸಲು 775 ಎಂಎಲ್ಡಿ ನೀರು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕಾವೇರಿ 5 ನೇ ಹಂತದ ಯೋಜನೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಅಧಿಕಾರಿಗಳು 313 ಸ್ಥಳಗಳಲ್ಲಿ ಹೊಸ ಬೋರ್ವೆಲ್ಗಳನ್ನು ಕೊರೆಯಿಸಲಿದ್ದಾರೆ. 1,200 ಕೊಳವೆ ಬಾವಿಗಳಿಗೆ ಕಾಯಕಲ್ಪ ನೀಡಲಿದ್ದಾರೆ. ಅಧಿಕಾರಿಗಳು ಕೊಳೆಗೇರಿಗಳು, ಎತ್ತರದ ಪ್ರದೇಶಗಳು ಮತ್ತು 110 ಹಳ್ಳಿಗಳಲ್ಲಿ ಬೋರ್ವೆಲ್ ನೀರಿನ ಮೇಲೆ ಅವಲಂಬಿತರಾಗಿರುವವರಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.