ಹೊಸಪೇಟೆ: ಸಾರಿಗೆ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಚಕ್ರದಡಿ ಸಿಲುಕಿ ಮೂರೂವರೆ ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಬಸ್ ಹಿಮ್ಮುಖವಾಗಿ ಚಲಿಸುವಾಗ ಪ್ಲಾಟ್ ಫಾರಂ ಬಳಿ ನಿಂತಿದ್ದ ಬಾಲಕನ ಮೇಲೆ ಹರಿದು ಬಾಲಕ ಕೊನೆಯುಸಿರೆಳೆದಿದ್ದಾನೆ.
ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮದ ರಾಚಪ್ಪ, ಮಲ್ಲಮ್ಮ ದಂಪತಿ ಪುತ್ರ ಕೇಸರಿ ನಂದನ್ ಮೃತ ಬಾಲಕ. ಗಂಗಾವತಿಗೆ ಹೋಗುವ ಪ್ಲಾಟ್ ಫಾರಂನಲ್ಲಿ ಪೋಷಕರೊಂದಿಗೆ ಬಾಲಕ ನಿಂತಿದ್ದ. ಬಸ್ ಹಿಂದೆ ಮಗು ನಿಂತಿದ್ದನ್ನು ನೋಡದೇ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಬಸ್ ಹರಿದಿದ್ದರಿಂದ ಕೇಸರಿ ನಂದನ್ ಮೃತಪಟ್ಟಿದ್ದಾನೆ.
ಮಲ್ಲಮ್ಮನ ತವರು ಮನೆ ಕೊಪ್ಪಳಕ್ಕೆ ಹೋಗಿ ವಾಪಸ್ ನಾಗಲಾಪುರಕ್ಕೆ ದಂಪತಿ ತೆರಳುತ್ತಿದ್ದರು. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೊಸಪೇಟೆ ಡಿವೈಎಸ್ಪಿ ಶರಣಬಸವೇಶ್ವರ ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.