ಬೆಂಗಳೂರು: ಚಿನ್ನದ ಅಂಗಡಿ ಮಾಲೀಕರೇ ಹುಷಾರ್..ಹುಷಾರ್..! ಇದೊಂದು ಖತರ್ನಾಕ್ ಜೋಡಿ ನಿಮ್ಮ ಅಂಗಡಿಗೆ ಎಂಟ್ರಿ ಕೊಟ್ರೆ ಮುಗಿತು. ಹೌದು ಚಿನ್ನಾಭರಣ ಖರೀದಿಸಿ ಯುಪಿಐ ಪಾವತಿಯ ಸೋಗಿನಲ್ಲಿ ವಂಚಿಸುತ್ತಿದ್ದ ಜೋಡಿಯೊಂದನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಂದನ್ ಹಾಗೂ ಕಲ್ಪಿತಾ ಬಂಧಿತರು.
ಹದಿನೈದು ದಿನಗಳ ಹಿಂದೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯ ಪರಮೇಶ್ ಜ್ಯುವೆಲ್ಲರಿ ಅಂಗಡಿಗೆ ಹೋಗಿದ್ದ ಆರೋಪಿಗಳು, 1.65 ಲಕ್ಷ ರೂ ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಹಣ ಪಾವತಿಸುವಾಗ ಯುಪಿಐ ಪೇಮೆಂಟ್ ಆ್ಯಪ್ ಬಳಸಿಕೊಂಡು ನಕಲಿ ಹಣ ಪಾವತಿಸಿರುವಂತೆ ತೋರಿಸಿದ್ದರು. ಅಂಗಡಿ ಮಾಲೀಕರು ನಂತರ ಪರಿಶೀಲನೆ ನಡೆಸಿದಾಗ ಹಣ ಖಾತೆಗೆ ಜಮೆ ಆಗದಿರುವುದು ಪತ್ತೆಯಾಗಿತ್ತು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ತಕ್ಷಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜೋಡಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ತಾವು ವಂಚಿಸಿದ ಚಿನ್ನವನ್ನು ಬೇರೊಂದು ಕಡೆ 1.30 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದರು. ಇದೇ ಮಾದರಿಯಲ್ಲಿ ಹಲವು ಅಂಗಡಿಗಳಲ್ಲಿ ನಕಲಿ ಪಾವತಿ ತೋರಿಸಿ ವಂಚಿಸಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.