ಬೆಂಗಳೂರು:- ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ರಾಜ್ಯದಲ್ಲೂ ಕೇಸರಿ ಅರಳಿಸಲು ಸನ್ನದ್ಧವಾಗಿರುವ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಕಲಬುರಗಿ, ಶಿವಮೊಗ್ಗವನ್ನು ಪ್ರಚಾರದ ಕಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ
ರಾಜ್ಯದಲ್ಲಿ ಪ್ರಧಾನಿ ಮೋದಿ ಅವರು ಶರಣರ ನೆಲ ಕಲಬುರಗಿ ಹಾಗೂ ಮಲೆನಾಡು ಶಿವಮೊಗ್ಗದಲ್ಲಿ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಕಮಲ ಅರಳಿಸಲು ಕಲಬುರಗಿ ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಏಕೆ ಆಯ್ಕೆ ಮಾಡಿಕೊಂಡರು ಎಂಬ ವಿಷಯ ಕುತೂಹಲ ಹೆಚ್ಚಿಸಿದೆ.
ಮೋದಿ ಕರ್ನಾಟಕದಲ್ಲಿ ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಚಾರ ಶುರು ಮಾಡುವ ಮೂಲಕ ಎರಡು ಸಮುದಾಯಗಳಿಗೆ ಸಂದೇಶ ನೀಡಲಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಲಿಂಗಾಯತ ಸಮುದಾಯಗಳ ಮೇಲೆ ಮೋದಿ ಪ್ರಚಾರ ಪ್ರಭಾವ ಬೀರಲಿದೆ.
ಕಲಬುರಗಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಭದ್ರಕೋಟೆಯಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಕ್ಷೇತ್ರ ಹಾಗೂ ಭದ್ರಕೋಟೆ ಆಗಿರುವ ಕಲಬುರಗಿಯಿಂದ ಸ್ಪರ್ಧೆ ಮಾಡ್ತಿಲ್ಲ. ಖರ್ಗೆ ಸ್ಪರ್ಧೆಯ ಹಿಂದೇಟನ್ನು ಪ್ರಶ್ನೆ ಮಾಡುವ ಮೂಲಕ ಮೋದಿ,ಇಂಡಿಯಾ ಕೂಟಕ್ಕೆ ಸ್ಪಷ್ಟ ಸಂದೇಶ ನೀಡಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು 2009 ಹಾಗೂ 2014ರ ಚುನಾವಣೆಯಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದರು. ನಂತರ 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಉಮೇಶ್ ಜಾಧವ್ ವಿರುದ್ಧ 95,000 ಮತಗಳ ಅಂತರದಲ್ಲಿ ಸೋತ್ತಿದ್ದರು. 2023ರಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಖರ್ಗೆ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಸದ್ಯ ರಾಜ್ಯದಲ್ಲ ಅಸ್ಥಿತ್ವದಲ್ಲರುವ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆಯಲ್ಲೂ ಜಯ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದೆ. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ ಸುರೇಶ್ ಮಾತ್ರ ಕಾಂಗ್ರೆಸ್ ನಿಂದ ಗೆದ್ದಿದ್ದರು. ಖರ್ಗೆ ಕೋಟೆಯಲ್ಲಿ ಎಸ್ ಸಿ ಸಮುದಾಯದ ವೋಟ್ ಬ್ಯಾಂಕ್ ನತ್ತ ಗಮನಹರಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಲಬುರಗಿಯಲ್ಲಿ ಮತಬೇಟೆಗೆ ಇಳಿದಿದ್ದಾರೆ.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪರಿಶಿಷ್ಟಪಂಗಡಗಳು ಹೆಚ್ಚಾಗಿದೆ. ಅದರಲ್ಲಿ ಎಡಪಂಥವಾಗಿರುವ ಮಾದಿಗ ಸಮುದಾಯದಲ್ಲಿ ಹೆಚ್ಚು ಮತದಾರರು ಇದ್ದಾರೆ. ಹೊಲೆಯರಿಗಿಂತ ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹೊಲೆಯರಿಗಿಂತ ಮಾದಿಗರು ಹಿಂದುಳಿದಿದ್ದಾರೆ.
2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಸೇರಿದಂತೆ ಹಲವೆಡೆ ಬಿಜೆಪಿ ಕಳಪೆ ಪ್ರದರ್ಶನ ನೀಡಿತ್ತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡಿರುವ ಪ್ರಧಾನಿ ಮೋದಿ ಸ್ವತಃ ಕಲಬುರಗಿಯಲ್ಲಿ ಪ್ರಚಾರಕ್ಕಿಳಿದು, ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ನೀಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಎ.ನಾರಾಯಣ್ ಅವರು ಹೇಳಿದ್ದಾರೆ
ಮಾರ್ಚ್ 18ರಂದು ಶಿವಮೊಗ್ಗದಲ್ಲಿ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ, ಮೇಲ್ಜಾತಿ ಲಿಂಗಾಯತರಲ್ಲಿ ಮಾಸ್ ಲೀಡರ್ ಆಗಿ ಗುರುತಿಸಿಕೊಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸನ್ಮಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರ ಜೊತೆಗೆ ಪಕ್ಷಕ್ಕಾಗಿ ಶ್ರಮಿಸಿದ ಯಡಿಯೂರಪ್ಪ ಅವರಿಗೆ ಸನ್ಮಾನ ಮೂಲಕ ಬೆಂಬಲ ಸೂಚಿಸಲಿದ್ದಾರೆ.
ರಾಜ್ಯದಲ್ಲಿ ಬಿಎಸ್ ವೈ ಎಂದೇ ಖ್ಯಾತಿ ಪಡೆದ ಯಡಿಯೂರಪ್ಪನವರು, 2008ರಲ್ಲಿ ಏಕಾಂಗಿಯಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದರು. 2019ರ ಚುನಾವಣೆಯಲ್ಲೂ ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆಲ್ಲುವಂತೆ ಮಾಡಿದ್ದರು. ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿವೈ ರಾಘವೇಂದ್ರ 4ನೇ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಹಳೆಯ ಮೈಸೂರು ಪ್ರದೇಶವಾಗಿರುವ ಶಿವಮೊಗ್ಗದಲ್ಲಿ ಬಿಜೆಪಿಗೆ ಜನಬೆಂಬಲವಿದೆ
ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಭದ್ರಕೋಟೆಯಾಗಿರುವ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲವಾಗಿದೆ. ಈ ಪ್ರದೇಶದಲ್ಲಿ ದಲಿತರನ್ನು ಓಲೈಸಲು ಬಿಜೆಪಿ ಪ್ರಯತ್ನಿಸುತ್ತದೆ. ಲಿಂಗಾಯತರು ಮತ್ತು ದಲಿತ ಒಬಿಸಿಗಳ ನಡುವೆ ಹೋರಾಟ ನಡೆಯುತ್ತಿದೆ. ಮೋದಿ ತಮ್ಮ ಪ್ರಚಾರವನ್ನು ಕಿಕ್ಸ್ಟಾರ್ಟ್ ಮಾಡಲು ಈ ಕ್ಷೇತ್ರವನ್ನು ಆಯ್ಕೆ ಮಾಡಲು ಇದು ಇನ್ನೊಂದು ಕಾರಣವಾಗಿರಬಹುದು ಎಂದು ರಾಜಕೀಯ ವಿಶ್ಲೇಷಕ ನಾರಾಯಣ ಹೇಳಿದರು.
ಶಿವಮೊಗ್ಗ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಇದನ್ನು ಪ್ರಚಾರ ಕಣವಾಗಿಟ್ಟುಕೊಂಡಿರುವ ಮೋದಿ, ಎಲ್ಲಾ ಕಡೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂಬ ಸಂದೇಶ ರವಾನಿಸಲಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಭದ್ರಗೊಳ್ಳಬೇಕು ಎಂದು ಪ್ರಧಾನಿ ಮೋದಿ ಪಣತೊಟ್ಟಿದ್ದಾರೆಂದು ಹೇಳಿದರು.