ಕೋಲಾರ: ದೇಶದೆಲ್ಲೆಡೆ ಆರೋಗ್ಯ ಕ್ಷೇತ್ರದ ಪ್ರಗತಿಗಾಗಿ ಸೇವೆ ಸಲ್ಲಿಸುತ್ತಿರುವ ಔಷಧ ಮಾರಾಟ ಪ್ರತಿನಿಧಿಗಳಿಗೆ ಅಗತ್ಯವಿರುವ ಸವಲತ್ತುಗಳು, ವೇತನ ಮೊದಲಾದವು ಸಿಗುವಂತೆ ಮಾಡಲು ಸೂಕ್ತವಾಗಿರುವ ಕಾಯಿದೆ-ಕಾನೂನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ರಾಜ್ಯ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಆಗ್ರಹಿಸಿದರು.
ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಶನಿವಾದದಿಂದ ಆರಂಭಗೊಂಡಿರುವ ಎರಡು ದಿನಗಳ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ 27ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿ, ಔಷಧ ಮಾರಾಟ ಪ್ರತಿನಿಧಿಗಳ ಪಾತ್ರ ಬಹುಮುಖ್ಯವಾಗಿದೆ, ಆದರೆ ಸರಿಯಾದ ಸಂಬಳ ಸಿಗುತ್ತಿಲ್ಲ, ಔಷಧ ಕಂಪನಿಗಳು ಶೋಷಣೆ ಮಾಡುತ್ತಿವೆ ಎಂದರು.
ಬೇರೆ ಕಂಪನಿಗಳಿಗಿಂತಲೂ ಔಷಧ ಕಂಪನಿಗಳಿಗಿಂತಲೂ ಔಷಧ ಕಂಪನಿಗಳು ವಿಭಿನ್ನವಾಗಿವೆ, ಬೇರೆಡೆ ಗ್ರಾಹಕರೇ ಖರೀದಿಸುವುದನ್ನು ನಿರ್ಧರಿಸುತ್ತಾರೆ, ಆದರೆ ಇಲ್ಲಿ ರೋಗಿಯೇ ಖರೀದಿದಾರನಾದರೂ ನಿರ್ಧರಿಸುವುದು ವೈದ್ಯರು. ಹೀಗಾಗಿ ಔಷಧ ಪ್ರತಿನಿಧಿಗಳು ಬಹುಮುಖ್ಯವಾಗಿ ಬೇಕು ಎಂದು ನುಡಿದರು.
ಅಧ್ಯಕ್ಷ ಜಾನ್ವೆಸ್ಲೆ ಮಾತನಾಡಿ, ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿರುವುದರಿಂದ ಕಂಪನಿಗಳಿಂದ ಪ್ರತಿನಿಧಿಗಳು ಶೋಷಣೆಗೊಳಗಾಗುತ್ತಿದ್ದಾರೆ, ಸೇವಾ ಭದ್ರತೆ ಇಲ್ಲ, ಸರಿಯಾದ ವೇತನ ಸಿಗುತ್ತಿಲ್ಲ, ಕನಿಷ್ಠ ಸವಲತ್ತುಗಳು ಮರಿಚಿಕೆಯಾಗಿವೆ. ಶೇ.80ರಷ್ಟು ಎಂಆರ್ಗಳು ನಿಗದಿತ ವೇತನವೂ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ.ಎಂ.ನಾರಾಯಣಸ್ವಾಮಿ, ಲೀಲಾವತಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎನ್.ಅರವಿಂದ್, ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಖಜಾಂಚಿ ಅಶೋಕ್ಕಮಾರ್, ಜಂಟಿ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಪದಾಧಿಕಾರಿಗಳಾದ ರಮೇಶ್, ಅಜಯ್, ಸುರೇಶ್, ರಾಜು, ಮಂಜುನಾಥ್, ವಿನೋದ್, ತಾರಕ್, ಜಗದೀಶ್, ಔಷಧಿ ವಿತರಕರು ಹಾಗೂ ರಾಜ್ಯ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳು ಭಾಗವಹಿಸಿದ್ದರು.