ಹುಬ್ಬಳ್ಳಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದೇ ಬಿಜೆಪಿಯವರು. ಹಿಂದೆ ಕಾಂಗ್ರೆಸ್ ಆಡಳಿತ ನಡೆಸಿತ್ತು. ಯಾವತ್ತೂ ಇಷ್ಟು ಪ್ರಮಾಣದ ಸಾಲ ಮಾಡಿರಲಿಲ್ಲ. ಹಾಗಾಗಿ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಬಿಜೆಪಿಯವರಿಗಿಲ್ಲ” ಎಂದು ಪೂರ್ವ ಕ್ಷೇತ್ರದ ಶಾಸಕರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಹೇಳಿದರು.
ಅವರು, ಗುರುವಾರ ವಾರ್ಡ್ ಸಂಖ್ಯೆ 78ರಲ್ಲಿ ಬರುವ ರಣದಮ್ಮ ಕಾಲೋನಿಯಲ್ಲಿ 5ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಸೇರಿದಂತೆ ಯಾವುದೇ ನಿಯಮಿತ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಕ್ಕೆ ಹಣದ ಕೊರತೆ ಇಲ್ಲ. ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಗಳು ಕುಂಠಿತಗೊಂಡಿವೆ ಅನ್ನೋದು ಸುಳ್ಳು. ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಯಾವುದೇ ಒಂದು ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಕ್ಷೇತ್ರದ ಜನರ ಸಹಕಾರ ಹಾಗೂ ಜನಪ್ರತಿನಿಧಿಗಳ ನಡುವೆ ಸಾಮರಸ್ಯ ಬೇಕು. ಅಂದಾಗ ಮಾತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ಸಾಮರಸ್ಯ ಕೊರತೆ ಉಂಟಾದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ವಿಶ್ವಾಸ ಪಡೆದು ಕಾರ್ಯನಿರ್ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದ ಅವರು, ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಸರಕಾರದ ಅನುದಾನ ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶಿವಗಂಗಮ್ಮ ಮಾನಶೆಟ್ಟರ್, ರವಿಕುಮಾರ ಮಾನಶೆಟ್ಟರ್, ಸೂರಿ-ಗಿರಿ, ನರಸಿಂಹ ಜವಳಿ, ಸಂಕಣ್ಣ ಹೊನ್ನಳ್ಳಿ, ರಾಕೇಶ ಪಲ್ಲಾಟೆ, ವಿನಾಯಕ ಅಥಣಿ, ಯಲ್ಲಪ್ಪ ಅಂಬಿಗೇರ, ಮೌನೇಶ ಪತ್ತಾರ ಸೇರಿದಂತೆ ಅನೇಕರಿದ್ದರು.