ಬೆಂಗಳೂರು: ಸಿಲಿಕಾನ್ನ ಸಿಟಿಯಲ್ಲಿ ಯಾವ ಏರಿಯಾಗೆ ಹೋದರೂ, ಯಾವ ವಾರ್ಡ್ಗೆ ಹೋದರೂ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ . ಹಲವೆಡೆ ವಾರಕ್ಕೆ 2 ದಿನ ಮಾತ್ರ ಕಾವೇರಿ ನೀರು ಬರುತ್ತಿದೆ. ಬೋರ್ವೆಲ್ಗಳ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಬೆಂಗಳೂರು ನಿವಾಸಿಗರು ಕಂಗಾಲಾಗಿದ್ದಾರೆ. ಇಂತಹ ಬರ ಸಮಯದಲ್ಲಿ ಜನರು ನೀರಿನ ಮೌಲ್ಯ ಅರಿಯಲಿ, ನೀರನ್ನು ಸರಿಯಾದ ಪ್ರಮಾಣದಲ್ಲಿ ಬಳಸಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ನೀರು ಉಳಿಸಿ ಬೆಂಗಳೂರು ಬೆಳೆಸಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀರು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.ವಿಧಾನಸೌಧದ ಆವರಣದಲ್ಲಿ ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದ ಆರಂಭಿಸಿರುವ ನೀರು ಉಳಿಸಿ ಬೆಂಗಳೂರು ಬೆಳಸಿ ಅಭಿಯಾನಕ್ಕೆ ಚಾಲನೆ ನೀಡಿದ ಶಿವಕುಮಾರ್ ಅವರು, ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ಆ್ಯಪ್ಗಳನ್ನು ಬಿಡುಗಡೆ ಮಾಡಿದರು.ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ಸುಳ್ಳು ಪ್ರಚಾರಕ್ಕೆ ಮುಂದಾಗಿದೆ.
ಲೋಕಸಭೆ ಟಿಕೆಟ್ ಹಂಚಿಕೆ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ನಿರ್ಧಾರ: ಡಿಸಿಎಂ ಡಿ.ಕೆ. ಶಿವಕುಮಾರ್
ನೀರಿನ ವಿಚಾರವಾಗಿ ಮಾತನಾಡಿದ ಡಿಕೆ ಶಿ, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಮ್ಮ ಆದ್ಯತೆ. 7 ಸಾವಿರಕ್ಕೂ ಹೆಚ್ಚು ಬೋರ್ವೆಲ್ಗಳು ಬತ್ತಿ ಹೋಗಿದ್ದಾಗಿಯೂ ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಟ್ಯಾಂಕರ್ಗಳನ್ನು ವಶಪಡಿಸಿಕೊಳ್ಳುವುದು, ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಪೂರೈಕೆ ಸೇರಿದಂತೆ ಹಲವು ಮುಂಜಾಗ್ರತೆಗಳಿಂದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ನಮ್ಮ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ವೇಗವಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಾನು ಕೈಜೋಡಿಸುತ್ತೇನೆ ಎಂದರು.
ಇನ್ನು ನಗರದ ಬರದ ಬಗ್ಗೆ ಮಾತನಾಡಿದ ಅವರು, 6,900 ಬೋರ್ವೆಲ್ ಬತ್ತಿ ಹೋಗಿದೆ. 9,000 ಬೋರ್ವೆಲ್ಗಳು ಚಾಲ್ತಿಯಲ್ಲಿವೆ. ಹೊಸ ಬೋರ್ವೆಲ್ ಕೊರೆಯಲು ಅನುಮತಿ ನೀಡುತ್ತಿದ್ದೇವೆ. ಇನ್ನೊಂದು ಹೊಸ ಬೋರ್ವೆಲ್ ಕೊರೆಯುವಾಗ BWSSB ಪರ್ಮಿಷನ್ ತೆಗೆದುಕೊಳ್ಳಬೇಕು. ಅವರಿಗೆ ಎಷ್ಟು ನೀರು ಬೇಕು ಅದನ್ನು ಬಳಸಿ ಉಳಿದ ನೀರನ್ನು ಸರ್ಕಾರಕ್ಕೆ ಕೊಡಬೇಕು. ಬಳಿಕ ಯಾವುದಕ್ಕೆ ಹಂಚಿಕೆ ಮಾಡಬೇಕು ಎಂಬುದನ್ನು ನಿಗಮ ಡಿಸೈಡ್ ಮಾಡುತ್ತೆ. ದೂರದ ಆಲೋಚನೆ ಇಟ್ಕೊಂಡು ಮೇಕೆ ದಾಟು ಹೋರಾಟ ಮಾಡಿದ್ದೆ. ನೀರನ್ನು ಹೇಗೆ ಉಳಿಸ ಬೇಕು, ಮುಂದಿ ಪೀಳಿಗೆಗೆ ಹೇಗೆ ಉಪಯುಕ್ತವಾಗಿಸಬೇಕು ಎಂದು ಆಲೋಚನೆ ಮಾಡಿದ್ದೇವೆ. ಯುದ್ಧದ ರೀತಿಯಲ್ಲಿ ನಾವು ನೀರಿಗಾಗಿ ಯೋಜನೆ ರೂಪಿಸಬೇಕಿದೆ. ಟ್ಯಾಂಕರ್ ಮಾಫಿಯಾಕ್ಕೆ ನಿಯಂತ್ರಣ ಹೇರುವ ಕೆಲಸ ಆಗಿದೆ. 110 ಹಳ್ಳಿಗಳಿಗೂ ನೀರನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದರು.
ಒಟ್ಟಾರೆ, ನೀರಿನ ನಿರ್ವಹಣೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರುವ ಸರ್ಕಾರ, ನೀರನ್ನು ಜನರ ನೀರಿನ ದಾಹವನ್ನು ನೀಗಿಸುವಲ್ಲಿ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ..